ಜೇಡಗಳು ಅಪಾಯಕಾರಿ ಅಲ್ಲ. ಅವು ಉಪಕಾರಿಗಳು.

ಜೇಡಗಳು ಅಪಾಯಕಾರಿ ಅಲ್ಲ. ಅವು ಉಪಕಾರಿಗಳು.

ಜೇಡಗಳು ಪ್ರಕೃತಿಯಲ್ಲಿ ಎಲ್ಲಾ ಕಡೆ ಕಂಡುಬರುವ ಕೀಟ ಜೀವಿಗಳು. ಇವುಗಳನ್ನು ರೈತನ ಮಿತ್ರ  ಎಂದೇ ಹೇಳಬಹುದು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ರಕ್ಷಣೆಯಲ್ಲಿ ಇವುಗಳ ಪಾತ್ರ ವಿಶಿಷ್ಟವಾದುದು. ಇವುಗಳನ್ನು ಬೇಟೆಗಾರ ಕೀಟಗಳು ಎಂದು ಕರೆಯಲಾಗುತ್ತದೆ.

ಜೇಡಗಳನ್ನು  ಕಂಡಾಕ್ಷಣ ಅದನ್ನು ಕೊಲ್ಲುತ್ತೇವೆ. ಯಾಕೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಅವು ಕಚ್ಚುತ್ತದೆ, ಕಚ್ಚಿದರೆ ಅದು ವಿಷ ಅದಕ್ಕಾಗಿ ಅದನ್ನು ಕೊಲ್ಲಬೇಕು ಎಂಬುದಾಗಿ ಹಿರಿಯರು ಹೇಳಿದ್ದನ್ನು ಕಿರಿಯರು ಪಾಲಿಸುತ್ತಾರೆ. ಕೆಲವೇ ಕೆಲವು ಕಚ್ಚುವವುಗಳು. ಬಹುತೇಕ ಉಪದ್ರವ ಕೊಡದ ಉಪಕಾರಿಗಳು. ಇವು ನೆಲದಲ್ಲಿ ಇರುವ ಹಾಗೆಯೇ ಹಾರುವ ಕೀಟಗಳನ್ನು ಹೊಂಚು ಹಾಕಿ ತಿನ್ನುವವವುಗಳು. ತಮ್ಮ ಶರೀರದ ತೂಕಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಭಕ್ಷಣೆ ಮಾಡುವ ಆರ್ಥ್ರೋಪೋಡಾ carnivorous arthropods ಜಾತಿಯ ಕೀಟಗಳು. ನಾವು ಸಣ್ಣವರಿದ್ದಾಗ (ಶಾಲೆಗೆ ಹೋಗುವ ಸಮಯ) ದೊಡ್ಡ ಮಕ್ಕಳು ಓತಿ ಕ್ಯಾತದ ಬಗ್ಗೆ ಹೀಗೆ ಹೇಳುತ್ತಿದ್ದರು. “ ಗಂಡಸರನ್ನು ನೋಡಿದ ಕೂಡಲೇ ಓತಿಯ ತಲೆ ಕೆಂಪು ಆಗುತ್ತದೆ. ಅದು  ನಮ್ಮ ರಕ್ತವನ್ನು ಹೀರುತ್ತದೆ. ಅದಕ್ಕೆ ಗಂಡಸರನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ಅದನ್ನು ಕೊಲ್ಲಬೇಕು” ಇದನ್ನು ಕೇಳಿಯೇ ನಾವೂ ಒಂದಷ್ಟು  ಓತಿಗಳನ್ನು ಅಟ್ಟಿಸಿ ಅಟ್ಟಿಸಿ ಕೊಂದದ್ದೂ ಇದೆ. (ಓತಿಯ ಉಪಕಾರೀ ಗುಣದ ಬಗ್ಗೆ ಮುಂದೆ ತಿಳಿಸುತ್ತೇವೆ) ನಿಜವಾಗಿ ಓತಿ ಎಂಬುದು ಉಪಕಾರಿ ಜೀವಿ. ಹಾಗೆಯೇ ಈ ಜೇಡವೂ ಸಹ. ಯಾವುದೋ ಕೆಲವು ಮಾತ್ರ ವಿಷಕಾರಿಯಾಗಿ ಆಕ್ರಮಣಕಾರಿಯಾಗಿರಬಹುದು. ಹಾಗೆಂದು ಸಿಕ್ಕ ಸಿಕ್ಕ ಜೇಡಗಳನ್ನು ಕೊಲ್ಲುವುದು ಸರಿಯಲ್ಲ. ಜೇಡಗಳು ಪರಭಕ್ಷಕ ಉಪಕಾರೀ ಕೀಟಗಳಾಗಿದ್ದು ಇವು ನಮ್ಮ ಬೆಳೆ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಜೇಡಗಳ ಜೀವನ ಕ್ರಮ:

  • ಜೇಡಗಳು ಪ್ರಕೃತಿಯಲ್ಲಿ ಎಲ್ಲ ಕಡೆ ವಾಸಿಸುವ ಜೀವಿಗಳು.
  • ಇವುಗಳು ತಮ್ಮ ಶರೀರದಿಂದ ಒಂದು ರೀತಿಯ ಅಂಟು ಪದಾರ್ಥವನ್ನು ಸ್ರವಿಸುತ್ತವೆ.
  • ಅದನ್ನು Spider silk ಎನ್ನುತ್ತಾರೆ. ಇದು ಅದರ ಶರೀದ ಒಂದು ಪ್ರೊಟೀನು ಆಗಿರುತ್ತದೆ.
  • ಜೇಡಗಳಲ್ಲಿ ಗಂಡು ಹೆಣ್ಣು ಜೋಡಿಯಾಗಿ ತಮ್ಮ ದೇಹದ ರೇಶ್ಮೆ ನೂಲಿನಿಂದ ಗೂಡು ಮಾಡಿ ಅದನ್ನು ರಕ್ಷಿಸುತ್ತದೆ.  
  • ಕೆಲವು ಜೇಡಗಳು ತಮ್ಮ ದೇಹದ ಮೇಲ್ಭಾಗದಲ್ಲಿ ಗೂಡಿನಂತಹ ರಚನೆ ನಿರ್ಮಿಸಿ ಅದರೊಳಗೆ ಮರಿಗಳನ್ನು ಬೆಳೆಸಿ ಗೂಡು ಒಡೆದು ಹೊರ ಬರುತ್ತದೆ.
  • ಕೆಲವು ಹತ್ತಿ ನೂಲಿನ ತರಹ ದಟ್ಟ ಬಲೆ ಹೆಣೆದು ಅದರಲ್ಲಿ ಮೊಟ್ಟೆ  ಮರಿ ಮಾಡುತ್ತವೆ.
  • ಜೇಡವು ಸುಮಾರು 3000 ದಷ್ಟು ಮೊಟ್ಟೆ ಇಡುತ್ತದೆ ಎನ್ನುತ್ತಾರೆ.
  • ಜಗತ್ತಿನಾದ್ಯಂತ ಇವುಗಳಲ್ಲಿ 40000 ದಷ್ಟು ವಿಧಗಳಿವೆಯಂತೆ.

ಬದುಕುವ ಕ್ರಮ:

  • ಕೆಲವು ನೆಲದಲ್ಲಿ ವಾಸಿಸುವವವುಗಳೂ ಕೆಲವು ಮನೆಯ ಒಳಗೆ ವಾಸಿಸುವವವುಗಳೂ  ಕೆಲವು ಮರ-ಗಿಡಗಳ ಆಶ್ರಯದಲ್ಲಿ ವಾಸಿಸುವವು ಇರುತ್ತವೆ.
  • ನೆಲದಲ್ಲಿ ವಾಸಿಸುವ ಜೇಡಗಳು ನಿಶಾಚರಿಗಳು ಎಂದು ಹೇಳಬಹುದು. ಹಗಲು ಕಾಣ ಸಿಗುತ್ತದೆ. ಆದರೆ ಚಟುವಟಿಕೆ ಕಡಿಮೆ.
  • ಮಳೆ ಕಡಿಮೆಯಾದ ತಕ್ಷಣ ನೆಲದಲ್ಲಿ ರಾತ್ರೆ ಹೊತ್ತು ಸಂಚರಿಸುವಾಗ ಟಾರ್ಚ್ ಲೈಟ್ ಬಿಟ್ಟಾಗ ಮಿಂಚು ಹುಳದ ತರಹ ಬೆಳಕು ಕಾಣುಸುತ್ತದೆ.
  • ಇವು ಜೇಡಗಳ ಕಣ್ಣು. ನೆಲದಲ್ಲಿ ಸಣ್ಣ ಬಿಲ ಮಾಡಿ ವಾಸಿಸಿ ಅದರ ದ್ವಾರದಲ್ಲಿ ಹೊಂಚು ಹಾಕುತ್ತಿರುತ್ತದೆ. 
  • ಬೇಟೆಗಾಗಿ ಹೊಂಚು ಹಾಕಲು ತಮ್ಮ ಶರೀರದ ಮೇಣವನ್ನು (Silk)  ಅನ್ನು ಬಲೆಯಂತೆ ಹೆಣೆದಿರುತ್ತವೆ.
  • ನೆಲದಲ್ಲಿ ಹರಿದಾಡುವ ಹುಳು ಹುಪ್ಪಟೆಗಳನ್ನು ಹೊಂಚು ಹಾಕಿ ಭೇಟೆಯಾಡುತ್ತವೆ.
  • ಹೊಳಪು ಕಣ್ಣುಗಳು ಮತ್ತು ಸಾಧಾರಣ ಗಾತ್ರದ ಶರೀರ.
  • ಮನೆಯಲ್ಲಿ ಶೆಡ್ ನಲ್ಲಿ ವಾಸಿಸುವ ಜೇಡಗಳೂ ಸಹ ಬಲೆ ಹಣೆದುಕೊಂಡು ಹೊಂಚು ಹಾಕಿ ಸೊಳ್ಳೆ, ನೊಣ ಇತ್ಯಾದಿ ಕೀಟಗಳನ್ನು ಹಿಡಿದು ತಿನ್ನುತ್ತವೆ. 
  • ಇಂತಹ ಜೇಡಗಳು ಸಪುರ ಕಾಲಿನ ಸಣ್ಣ ದೇಹದವು ಆಗಿರುತ್ತವೆ.
  • ಮರ ಗಿಡಗಳಲ್ಲಿ ವಾಸಿಸುವ ಜೇಡಗಳು( ಎತ್ತರದಲ್ಲಿ ಭೇಟೆಯಾಡುವ) ಜೇಡಗಳು ಸ್ವಲ್ಪ ದೊಡ್ಡ ಗಾತ್ರದಲ್ಲಿರುತ್ತವೆ.
  • ದೊಡ್ದದಾದ  ಬಲೆಗಳನ್ನು ಗೆಲ್ಲಿನಿಂದ ಗೆಲ್ಲಿಗೆ ಹೆಣೆದು ಅದರ ಒಂದು ಮೂಲೆಯಲ್ಲಿ ಹೊಂಚು ಹಾಕುತ್ತಾ  ಇರುತ್ತವೆ.
  • ಇದು ಮಿಡತೆ, ಚಿಟ್ತೆ, ದುಂಬಿ, ಸಣ್ಣ ಗಾತ್ರದ ಹಕ್ಕಿಗಳನ್ನು ಸಹ ತನ್ನ ಬಲೆಯಲ್ಲಿ ಬಂಧಿಸಿ ಕೊಂದು ತಿನ್ನುತ್ತದೆ.

ಜೇಡ ಹೆಣೆದ ಬಲೆಯ ಅಂಟು ಒಮ್ಮೆ ಅಂಟಿಕೊಂಡರೆ ಬಿಡಿಸಲು ಅಷ್ಟು ಸುಲಭ ಇಲ್ಲ. ಹಾಗಾಗಿ ಬಲೆಗೆ ಬಿದ್ದ ಯಾವುದೇ ಕೀಟ ತಪ್ಪಿಸಿಕೊಳ್ಳಲಾರದೆ ಬಂಧಿಯಾಗುತ್ತದೆ.

ಹಣ್ಣು ಇತ್ಯಾದಿಗಳಿಗೆ ತೊಂದರೆ ಮಾಡುವ ಚಿಟ್ಟೆಗಳನ್ನು ಬಂಧಿಸುತ್ತದೆ.

ಜೇಡಗಳಿಂದ ಏನೇನು ಪ್ರಯೋಜನ:

  • ಜೇಡಗಳಿದ್ದರೆ ನೊಣಗಳ ಉಪಟಳ ಕಡಿಮೆ ಎನ್ನುತ್ತಾರೆ.
  • ಹಾರುವ ನೊಣಗಳನ್ನು ಅದರಲ್ಲೂ ವಿಶೇಷವಾವಾಗಿ ಸೊಳ್ಳೆಗಳನ್ನು ಅವು ಬಲೆಗೆ ಬೀಳಿಸಿ ಕೊಲ್ಲುತ್ತವೆ.
  • ಪರಿಸರದ ಸಮತೋಲನಕ್ಕೆ ಜೇಡಗಳ ಪಾತ್ರ ಮಹತ್ವವಾದದ್ದು.
  • ಮೇಲೆ ಹೇಳಿದಂತೆ ಇವು ಆಯಾಯಾ ಋತುಮನದಲ್ಲಿ ಹೆಚ್ಚಳವಾಗುವ ಕೀಟಗಳನ್ನು ನಿಯಂತ್ರಿಸುತ್ತವೆ.
  • ಮಳೆಗಾಲ ಕಳೆದು ಚಳಿಗಾಲ ಬರುವಾಗ ಹೆಚ್ಚಿನ ಹುಳಗಳು ಚಿಟ್ಟೆಗಳಾಗುತ್ತವೆ.
  • ಈ ಸಮಯದಲ್ಲಿ ಅದನ್ನು ಭಕ್ಷಿಸಲು ಜೇಡಗಳ ಸಂತತಿಯೂ ಹೆಚ್ಚಾಗುತ್ತದೆ. 
  • ಜೇಡಗಳ ಸಂತತಿ ಹೆಚ್ಚಾದಾಗ ಹಲ್ಲಿಗಳು, ಚೇಳುಗಳು, ಹಾವು, ಕಪ್ಪೆ, ಕೆಲವು ಹಕ್ಕಿಗಳು, ಬೆಕ್ಕುಗಳು ತಿಂದು ಸಮತೋಲನದಲ್ಲಿ ಇರುವಂತೆ ಮಾಡುತ್ತವೆ.
  • ಬೆಳೆಗಳಲ್ಲಿ ಜೇಡ ಬಲೆ ಕಟ್ಟಿದೆ ಎಂದರೆ ಅಲ್ಲಿ ಯಾವುದೋ ಕೀಟ ಇದೆ ಎಂದರ್ಥ.
  • ಹಾಗೆಯೇ ಭತ್ತದ ಹೊಲದಲ್ಲಿ ಇವು ಬಹಳಷ್ಟು ಕೀಟಗಳನು ನಿಯಂತ್ರಿಸುತ್ತವೆ.
  • ಒಟ್ಟಿನಲ್ಲಿ ಜೇಡಗಳು ಮಾನವನಿಗೆ ಉಪಕಾರಿ.

ಪರಭಕ್ಷಕಗಳು:

  • ಹೆಚ್ಚಿನ ಜೇಡಗಳು ಪರಭಕ್ಷಕಗಳು. ಇವು ಬೆಳೆಗಳಿಗೆ ಹಾನಿಮಾಡುವ ಕೀಟಗಳನ್ನು ತಿನ್ನುತ್ತವೆ.
  • ಇದನ್ನು ಜೈವಿಕ ನಿಯಂತ್ರಣ (Biological control) ಎನ್ನುತೇವೆ.
  • ಕೀಟ ನಿಯಂತ್ರಣಕ್ಕೆ ಔಷಧಿ ಸಿಂಪರಣೆ ಎಂಬುದು ಅಂತಿಮ ಪ್ರಯತ್ನ.
  • ಸಹಜವಾಗಿ ಅವುಗಳ ನಿಯಂತ್ರಣ ಆದರೆ ಬಹಳ ಉತ್ತಮ.
  • ಜೀವಿ ಪರಿಸ್ಥಿತಿಯನ್ನು (Eco system) ಸಮತೋಲನದಲ್ಲಿ ಇರಿಸುವಲ್ಲಿ ಇವುಗಳ ಪಾತ್ರ ಮಹತ್ವವಾದದ್ದು.
  • ಈ ಪ್ರಕ್ರಿಯೆಯಲ್ಲಿ ಇವುಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ.
  • ಕೀಟ ನಿಯಂತ್ರಣದಲ್ಲಿ ಇವುಗಳದ್ದು ವಿಶಿಷ್ಟ ಕ್ರಮ ಇದೆ.
  • ಅಂದರೆ ಬೇಟೆಯಾಡುವಿಕೆ, ಅವಾಸ ಸ್ಥಾನವನ್ನು ಹುಡುಕುವುದು ಮತ್ತು ಯಾವ ಋತುಮಾನದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತದೆಯೋ ಆ ಸಮಯದಲ್ಲಿ ಅವುಗಳ ಸಂತತಿಯೂ ಹೆಚ್ಚಳವಾಗುವುದು. 
  • ಹಿಂದಿನವರು ಕೀಟನಾಶಕ ಇಲ್ಲದಿದ್ದಾಗ ಬೆಳೆ ಬೆಳೆಯುತ್ತಿದ್ದುದು ಇದೇ ಕ್ರಮದಲ್ಲಿ.
  • ಕೀಟನಾಶಕಗಳ ಬಳಕೆಯಿಂದ ಜೀವಿಗಳ ಅಸಮತೋಲನ (Biological imbalance) ಉಂಟಾಗುತ್ತದೆ.
  • ಹಾಗೆಯೇ  ಕೀಟಗಳು ನಿರೋಧಕ ಶಕ್ತಿಯನ್ನೂ ಪಡೆಯುತ್ತವೆ. ಇದು ಈಗ ಆಗಿದೆ. 

ಕೀಟನಾಶಕಗಳು ಮತ್ತು ಜೇಡಗಳು:

  • ಬಹಳಷ್ಟು ಜೇಡಗಳು ಬೆಳೆಗಳಲ್ಲಿ ಆಶ್ರಯ ಪಡೆದಿರುತ್ತವೆ.
  • ಇವು ತಿಗಣೆಗಳಿಂದ ಹಿಡಿದು ದುಂಬಿ ತನಕ ಬೇಟೆಯಾಡಿ ಸಾಯಿಸುತ್ತವೆ.
  • ಕೀಟನಾಶಕ ಸಿಂಪಡಿಸಿದರೆ ಅವು ಸಾಯುತ್ತವೆ ಹಾಗಾಗಿ ತೀರಾ ಆಗತ್ಯ ಇದ್ದಾಗ ಮಾತ್ರ ಕೀಟನಾಶಕ ಸಿಂಪಡಿಸಿ.
  • ಜೇಡಗಳ ಅದರಲ್ಲೂ ಬೆಳೆಗಳಿಗೆ ತೊಂದರೆ ಮಾಡುವ ಕೀಟವನ್ನು ತಿನ್ನುವ ಜೇಡಗಳ ಸಂತತಿ ಅಪರೂಪವಾಗುತ್ತಿದೆ.
  • ಇದರಿಂದ ಬೆಳೆ ನಷ್ಟ ಹೆಚ್ಚಾಗುತ್ತಿದೆ.

ಜೇಡ ಕಚ್ಚಿದರೆ ಇದು ಮದ್ದು:

ಜೇಡ ಕಚ್ಚಿದರೆ ಅಂತದ್ದೇನೂ ಆಗುವುದಿಲ್ಲ. ಆದಾಗ್ಯೂ ತುರಿಕೆ, ಬಾವು ಉಂಟಾಗುವುದೂ ಇದೆ. ಇದಕ್ಕೆ ಹಳ್ಳಿಯ ಮದ್ದು ನೆಲ್ಲಿ ಮರದ ತೊಗಟೆಯನ್ನು ಸ್ವಲ್ಪ ತೆಗೆದು ಗಂಧ ತೆಯ್ದಂತೆ ತೇಯ್ದು ಒಮ್ಮೆ ಎರಡು ಸಲ ಹಚ್ಚಿದರೆ ವಾಸಿಯಾಗುತ್ತದೆ. ಹಾಗಾಗಿ ಜೇಡಕ್ಕೆ ಅಂಜಬೇಕಾಗಿಲ್ಲ.

ಒಟ್ಟಿನಲ್ಲಿ ಜೇಡ ಮಾನವನ ಶತ್ರು ಅಲ್ಲ. ಮಿತ್ರ. ಇವುಗಳ ಬದುಕಿಗೂ ನಾವು ಅವಕಾಶ ಕೊಡಬೇಕು. ಅವು ನಮ್ಮ ಉಪಕಾರಕ್ಕೆ ಇರುವ ಜೀವಿಗಳು.

Leave a Reply

Your email address will not be published. Required fields are marked *

error: Content is protected !!