ಮಳೆಗಾಲದಲ್ಲಿ ಕೊಕ್ಕೋ ಬೆಳೆ ಉಳಿಸಿಕೊಳ್ಳಬೇಕಾದರೆ ಶಿಲೀಂದ್ರ ನಾಶಕದ ಸಿಂಪರಣೆ ಅತ್ಯಗತ್ಯ. ಕೊಕ್ಕೋ ಬೆಳೆ ಶಿಲೀಂದ್ರ ರೋಗಕ್ಕೆ ಬೇಗ ತುತ್ತಾಗುವ ಬೆಳೆಯಾಗಿದ್ದು ಮಳೆಗಾಲ ಪೂರ್ವದಲ್ಲೇ ಸಿಂಪರಣೆ ಮಾಡಿದರೆ ಉತ್ತಮ. ಮಳೆಗಾಲ ಮುಗಿಯುವ ತನಕ ತಿಂಗಳಿಗೆ ಒಮ್ಮೆಯಂತೆ ಬೋರ್ಡೋ ದ್ರಾವಣ ಅಥವಾ ಇನ್ನಿತರ ಶಿಲೀಂದ್ರ ನಾಶಕವನ್ನು ಸಿಂಪಡಿಸುತ್ತಾ ಇದ್ದರೆ ಉತ್ತಮ ಫಸಲು ಪಡೆಯಬಹುದು.
ಕೊಕ್ಕೋ ಎಂಬುದು ವರ್ಷ ಪೂರ್ತಿ ಬೆಳೆ ಇರುವ ಮಿಶ್ರ ಬೆಳೆ . ಕೆಲವು ಸೀಸನ್ ಗಳಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಕೆಲವು ಸೀಸನ್ ನಲ್ಲಿ ಹೆಚ್ಚಾಗಬಹುದು. ಆದರೆ ವರ್ಷಪೂರ್ತಿ ಬೆಳೆ ಇರುತ್ತದೆ. ಬೆಲೆ ಏನೇ ಇರಲಿ, ಒಂದು ಮಿಶ್ರ ಬೆಳೆಯಾಗಿ ಆದಾಯವನ್ನು ತಂದುಕೊಡುವ ಬೆಳೆ. ಬಹುತೇಕ ಬೆಳೆಗಾರರಲ್ಲಿ ಮಳೆಗಾಲದಲ್ಲಿ ಫಸಲು ಇರುವುದಿಲ್ಲ. ಬೇಸಿಗೆಯಲ್ಲಿ ಇರುತ್ತದೆ. ಕಾರಣ ಇಷ್ಟೇ ಅವರು ಅದಕ್ಕೆ ಶಿಲೀಂದ್ರ ನಾಶಕ ಸಿಂಪರಣೆ ಮಾಡುವುದಿಲ್ಲ. ಕೊಕ್ಕೋ ಬೆಳೆಗೆ ಕಾಯಿಗಳಿಗೆ , ಎಲೆಗಳಿಗೆ ಗೆಲ್ಲುಗಳಿಗೆ ಫ್ಹೈಟೋಪ್ಥೆರಾ ಪಾಲ್ಮಿವೋರಾ Phytophthora palmivora ಜಾತಿಯ ಶಿಲೀಂದ್ರ ಒಂದು ಮಳೆ ಬಂದ ತಕ್ಷಣವೇ ಹಾನಿ ಮಾಡುತ್ತದೆ. ಇದರಿಂದ ಭಾರೀ ಪ್ರಮಾಣದಲ್ಲಿ ಫಸಲು ನಷ್ಟವಾಗುತ್ತದೆ. ಕೆಲವೊಮ್ಮೆ ರೋಗ ತೀವ್ರವಾದರೆ ಗಿಡಗಳೂ ಸಾಯುತ್ತವೆ. ಕೊಕ್ಕೋ ಬೆಳೆಸುವವರು ಬೆಳೆಗೆ ಏನೂ ಮಾಡದಿದ್ದರೂ ತೊಂದರೆ ಇಲ್ಲ. ಮಳೆಗಾಲದಲ್ಲಿ ಶಿಲೀಂದ್ರ ನಾಶಕವನ್ನು ಸಿಂಪಡಿಸದಿದ್ದರೆ ಮುಕ್ಕಾಲು ಪಾಲಿಗೂ ಹೆಚ್ಚು ಫಸಲು ನಷ್ಟಮಾಡಿಕೊಳ್ಳಬೇಕಾಗುತ್ತದೆ. ಕೊಳೆ ಶಿಲೀಂದ್ರವು ಬರೇ ಕೊಕ್ಕೋಗೆ ಮಾತ್ರವಲ್ಲ, ದಿವ್ವಿ ಹಲಸು, ಹಲಸು ಮುಂತಾದ ಬೆಳೆಗಳಿಗೂ ಸಹ ಮಳೆಗಾಲ ಪ್ರಾರಂಭದಲ್ಲೇ ಹಾನಿ ಮಾಡುತ್ತವೆ.
ರೋಗ ಹೇಗೆ ಬರುತ್ತದೆ?
- ಮಳೆ ಒಂದು ಬಂದ ತಕ್ಷಣ ಕಾಯಿಯ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಾಗಲಾರಂಭಿಸುತ್ತದೆ.
- ಮಳೆ ,ಗಾಳಿಯ ಮೂಲಕ ಈ ಶಿಲೀಂದರವು ತೇವಾಂಶ ಹೆಚ್ಚಾದ ತಕ್ಷಣ ಬಾಧಿಸುತ್ತದೆ.
- ಸ್ಪ್ರಿಂಕ್ಲರ್ ನೀರಾವರಿ ಇರುವ ತೋಟಗಳಲ್ಲಿ ಬೇಸಿಗೆಯಲ್ಲೂ ಸಹ ಆಲ್ಪ ಸ್ವಲ್ಪ ಈ ರೋಗ ಬಾಧಿಸುವುದಿದೆ.
- ಕಾಂಡದಲ್ಲಿ ಬಿಡುವ ಕಾಯಿಗಳಿಗೆ ಬೇಗ ಶಿಲೀಂದ್ರ ರೋಗ ಬಾಧಿಸುತ್ತದೆ. ಗೆಲ್ಲುಗಳಲ್ಲಿ ನಿಧಾನ.
- ಯಾವ ಭಾಗ ತೆರೆದುಕೊಂಡಿರುತ್ತದೆಯೋ ಅಲ್ಲಿ ಮೊದಲು ರೋಗ ಕಾಣಿಸಿಕೊಳ್ಳುತ್ತದೆ. (ನೀರಿನ ನೇರ ಹೊಡೆತ ಬೀಳುವ ಕಡೆ).
- ಮೊದಲಾಗಿ ಕಾಯಿಗಳಲ್ಲಿ ಕಪ್ಪು (Black pod disease)ಕಲೆಗಳು ಗೋಚರವಾಗಿ ಅದು ಇಡೀ ಕಾಯಿಗೆ ವ್ಯಾಪಿಸುತ್ತದೆ.
- ಸಸ್ಯಕ್ಕೆ ಈ ರೋಗ ಬಾಧಿಸಿದಾಗ ಮೊದಲು ಎಲೆ ಉದುರಲು ಪ್ರಾರಂಭವಾಗುತ್ತದೆ.
- ಎಲೆ ಉದುರಿದ ನಂತರದ ಹಂತ ಗೆಲ್ಲು ಒಣಗುತ್ತಾ ಬರುವುದು.
- ಮಳೆ ನೀರು, ಗಾಳಿಯ ಮೂಲಕ ಒಂದು ಗಿಡಕ್ಕೆ ಬಾಧಿಸಿದ ರೋಗ ಸೋಂಕು ಮತ್ತೊಂದು ಗಿಡಕ್ಕೂ ಬಾಧಿಸುತ್ತದೆ.
- ಗೆಲ್ಲಿಗೆ ಹಾಗೆಯೇ ಅನೂಕೂಲಸ್ಥಿತಿ ದೊರೆತರೆ ಬೇರಿಗೂ ಸಹ ಇದರ ತೊಂದರೆ ಉಂಟಾಗುತ್ತದೆ.
- ಕೆಲವೊಮ್ಮೆ ಗಿಡ ಸಾಯುವುದೂ ಇದೆ. ಎಳೆಯ ಕಾಯಿಗಳ ಅರ್ಧಕ್ಕೂ ಹೆಚ್ಚು ಭಾಗ ಕಪ್ಪಗಾಗಿ, ಸ್ವಲ್ಪ ಹಣ್ಣಾದಂತೆ ಕಾಣಿಸುತ್ತದೆ.
- ಆದರೆ ಬಲಿತಿರುವುದಿಲ್ಲ. ಮಳೆಗಾಲದಲ್ಲಿ ಫಸಲು ಹೆಚ್ಚಾಗಿರುತ್ತದೆಯಾದರೂ ಅದರಲ್ಲಿ ಮುಕ್ಕಾಲು ಪಾಲಿಗೂ ಅಧಿಕ ರೋಗದಿಂದ ಹಾಳಾಗುತ್ತದೆ.

ಏನು ಸಿಂಪರಣೆ ಮಾಡಬೇಕು?
- ಅಡಿಕೆಯ ಕೊಳೆ ರೋಗಕ್ಕೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನೇ ಕೊಕ್ಕೋ ಮರಗಳಿಗೂ ಸಿಂಪಡಿಸಬಹುದು.
- ಇದನ್ನು ಮಳೆ ಒಂದು ಬಂದ ತಕ್ಷಣ ಎಲೆಗಳ ಅಡಿ ಭಾಗಕ್ಕೆ ಮತ್ತು ಕಾಂಡಕ್ಕೆ ಹಾಗೆಯೇ ಕಾಯಿಗಳ ಮೇಲೆ ಬೀಳುವಂತೆ ಸಿಂಪರಣೆ ಮಾಡಬೇಕು.
- ಇದಲ್ಲದಿದ್ದರೆ ಕಾಪರ್ ಆಕ್ಸೀ ಕ್ಲೋರೈಡ್ COC ಯನ್ನೂ ಸಹ ಸಿಂಪರಣೆ ,ಮಾಡಬಹುದು.
- ಕೆಲವು ಸಿದ್ದ ರೂಪದ ಬೋರ್ಡೋ ಪೈಂಟ್ ಸಿಗುತ್ತದೆ.
- ಅದನ್ನೂ ದ್ರವೀಕರಿಸಿ ಸಿಂಪರಣೆ ಮಾಡಬಹುದು.
- ಕಾಯಿಗಳಿಗೆ ರೋಗ ಸೋಂಕು ತಗಲಿದ್ದರೆ ಅಂತಹ ಕಾಯಿಗಳ ಮೇಲೆ ಕಾರ್ಬನ್ ಡೈಜಿಮ್( ಬಾವಿಸ್ಟೀನ್) ಸಿಂಪಡಿಸಿದರೆ ಹರಡುವಿಕೆ ಕಡಿಮೆಯಾಗುತ್ತದೆ.
- ಸಿಂಪಡಿಸುವ ದ್ರಾವಣಕ್ಕೆ ಪ್ರಸರಕ ಸೇರಿಸಿದರೆ ಒಳ್ಳೆಯದು.
- ಅದು ಹೆಚ್ಚು ಸಮಯದ ತನಕ ಅಂಟಿಕೊಂಡು ಇರುತ್ತದೆ.
- ಬೋರ್ಡೋ ದ್ರಾವಣಕ್ಕೆ ಹೆಚ್ಚು ಸಮಯದ ತನಕ ಅಂಟು ಗುಣ ಇರುವುದರಿಂದ ಅದನ್ನೇ ಬಳಕೆ ಮಾಡುವುದು ಉತ್ತಮ
ಏನು ಮಾಡಬಾರದು:
- ಕೊಕ್ಕೋ ಸಸ್ಯಗಳ ಅನವಶ್ಯಕ ಅಥವಾ ಕೊಯಿಲಿಗೆ ಅಡೆ ತಡೆಯಾಗುವ ಗೆಲ್ಲುಗಳನ್ನು ಮಳೆ ಬರುವ ಮುಂಚೆಯೇ ಕಡಿಯಬೇಕು.
- ಕಡಿದ ಭಾಗಕ್ಕೆ ಬೋರ್ಡೋ ಪೈಂಟ್ ಅಥವಾ COC ಪೇಸ್ಟ್ ಹಚ್ಚಬೇಕು.
- ಅಳಿಲು ತಿಂದ ಮಂಗ ತಿಂದ ಕೊಕ್ಕೋ ಕೋಡುಗಳನ್ನು ಮರದಲ್ಲೇ ಉಳಿಸಬಾರದು.
- ಅದನ್ನು ಕೊಯಿಲು ಮಾಡಿ ದೂರ ಒಯ್ದು ಸುಡುವುದು ಸೂಕ್ತ.
- ಇದರ ಮೂಲಕ ಶಿಲೀಂದ್ರ ಸೋಂಕು ಹರಡುವ ಸಂಭವ ಇರುತ್ತದೆ.
- ಮಳೆಗಾಲದಲ್ಲಿ ಗೆಲ್ಲುಗಳು ನೆಲಕ್ಕೆ ತಾಗುವಂತೆ ಬಾಗಿದ್ದರೆ ಅಂತಹ ಗೆಲ್ಲುಗಳನ್ನು ಏನಾದರೂ ಕಂಬಗಳನ್ನು ಕೊಟ್ಟು ನೆಲದಿಂದ ಕನಿಷ್ಟ 1 ಮೀ. ಎತ್ತರಕ್ಕಿರುವಂತೆ ಮಾಡಬೇಕು.
- ಮಳೆಗಾಲದಲ್ಲಿ ರೋಗ ಸೋಂಕು ತಗಲಿದ ಕಾಯಿಗಳನ್ನು ಸಸ್ಯದಲ್ಲೇ ಬಿಡಬಾರದು.
- ಅದನ್ನು ಕೊಯಿಲು ಮಾಡಿ ದೂರದ ಜಾಗದಲ್ಲಿ ಹುಗಿದು ಹಾಕಬೇಕು.
- ಮಳೆಗಾಲದಲ್ಲಿ ಪ್ರೂನಿಂಗ್ ಮಾಡಿದರೆ ರೋಗ ಹಚ್ಚಾಗುತ್ತದೆ.

ಹೇಗೆ ಮತ್ತು ಎಷ್ಟು ಸಿಂಪರಣೆ ಮಾಡಬೇಕು:
- ಕೊಕ್ಕೋ ಸಸ್ಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಶಿಲೀಂದ್ರನಾಶಕ ಬೇಕಾಗುತ್ತದೆ.
- ಗಿಡದ ಎಲೆಗಳ ಅಡಿ ಭಾಗಕ್ಕೆ ಮೊದಲು ರೋಗ ಸೋಂಕು ತಗಲುವ ಕಾರಣ ಎಲೆ ಅಡಿಗೆ ಶಿಲೀಂದ್ರ ನಾಶಕ ಬೀಳುವಂತೆ ಸಿಂಪರಣೆ ಮಾಡಬೇಕು.
- ಹಾಗೆಯೇ ಕಾಂಡಕ್ಕೂ ರೋಗ ಸೋಂಕು ತಗಲುವ ಕಾರಣ ಕಾಂಡಕ್ಕೂ ಬೀಳುವಂತೆ ಸಿಂಪರಣೆ ಮಾಡಬೇಕಾಗುತ್ತದೆ.
- ಕಾಯಿ ಪೂರ್ತಿ ಕವರ್ ಆಗುವಂತೆ ಸಿಂಪರಣೆ ಮಾಡಬೇಕು.
- ಮಳೆಯ ತೀವ್ರತೆ ಹೆಚ್ಚು ಇದ್ದಾಗ ತಿಂಗಳಿಗೊಮ್ಮೆ ಶಿಲೀಂದ್ರ್ತ ನಾಶಕ ಸಿಂಪರಣೆ ಮಾಡಿದರೆ ಒಳ್ಳೆಯದು.
- ಅಧಿಕ ಮಳೆ ಇದ್ದಾಗ ರೋಗ ಬರುವುದಕ್ಕಿಂತ ಹೆಚ್ಚು, ಬಿಸಿಲು ಮಳೆ ಇರುವ ಸಮಯದಲ್ಲಿ ಬರುವುದು ಜಾಸ್ತಿ.
- ಹಾಗಾಗಿ ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಮತ್ತು ಮಳೆ ಮುಗಿಯುವ ಸಮಯದಲ್ಲಿ ಕಡ್ದಾಯವಾಗಿ ಸಿಂಪರಣೆ ಮಾಡಬೇಕು.
- ಮಳೆ ಮುಗಿಯುವ ಸಮಯದಲ್ಲಿ ಸಿಂಪರಣೆ ಮಾಡದಿದ್ದರೆ ಬೇಸಿಗೆಯ ದೊಡ್ಡ ಬೆಳೆ ಸಹ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗುತ್ತದೆ.
- ಕೊಕ್ಕೋ ಸಸ್ಯ ಇರುವಲ್ಲಿ ನಿರಂತರವಾಗಿ ಎಲೆ ಉದುರುವ ಕಾರಣ ನೆಲದಲ್ಲಿ ಮೇಲು ಹಾಸಲು ಇರುತ್ತದೆ.
- ಹಾಗಾಗಿ ಮಳೆ ಬಂದ ತಕ್ಷಣ ಅಲ್ಲಿ ನೀರು – ತೇವಾಂಶ ಹೆಚ್ಚಳವಾಗಿ ರೋಗದ ಬೀಜಾಣುಗಳು ಬೇಗ ಮೊಳಕೆ ಒಡೆಯುತ್ತವೆ.
ರೋಗ ನಿರೋಧಕ ಶಕ್ತಿಯ ತಳಿ:
- ಕೊಕ್ಕೋ ದಲ್ಲಿ ಫೈಟೋಪ್ತೆರಾ ರೋಗಕ್ಕೆ ನಿರೋಧಕ ಶಕ್ತಿಪಡೆದ ತಳಿಯನ್ನು ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ.
- ಕೊಕ್ಕೋ ಬೆಳೆಗಾರರ ತೋಟದಲ್ಲೂ ಇಂತಹ ರೋಗ ನಿರೋಧಕ ಶಕ್ತಿ ಉಳ್ಳ ತಳಿಗಳು ಸಿಗಬಹುದು.
- ಮಳೆಗಾಲದಲ್ಲಿ ರೋಗ ಕಡಿಮೆ ಬಾಧಿಸುವ ಅಥವಾ ಬಾಧಿಸದೆ ಇರುವ ಕೆಲವು ಮರಗಳನ್ನು ಗುರುತಿಸಿ ಅದರ ಬೀಜದಿಂದ ಸಸ್ಯಾಭಿವೃದ್ದಿ ಮಾಡಬಹುದು.
- ಹಾಗೆಯೇ ಕೆಲವು ಮರಗಳಿಗೆ ಬೇಗ ರೋಗ ಸೋಂಕು ತಗಲುವುದೂ ಇದೆ.
- ಅಂತಹ ಮರಗಳನ್ನು ಗುರುತಿಸಿ ಅದಕ್ಕೆ ಹಚ್ಚಿನ ಶಿಲೀಂದ್ರ ನಾಶಕದ ಉಪಚಾರ ಮಾಡಿ ರೋಗ ಹರಡುವುದನ್ನು ತಡೆಯಬಹುದು.
- ಆ ಮರಗಳ ಬೀಜಗಳನ್ನು ಸಸ್ಯಾಭಿವೃದ್ದಿಗೆ ಬಳಕೆ ಮಡಬಾರದು.
ಕೊಕ್ಕೋ ಬೆಳೆ ಎಡೆ ಆದಾಯಕ್ಕೂ ಆಗುವ ಬೆಳೆ. ತೋಟದಲ್ಲಿ ಕಳೆ ನಿಯಂತ್ರಣಕ್ಕೂ ಪ್ರಯೋಜನಕಾರಿ. ಇದರ ಸೊಪ್ಪು ಇತ್ಯಾದಿ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಅಗತ್ಯ. ತೋಟದಲ್ಲಿ ತಂಪು ಇರುತ್ತದೆ. ಕೋಡುಗಳು ಪಶು ಮೇವು ಸಹ.ಆದಾಯ. ಆಹಾರ ಬೆಳೆ ಆದ ಕಾರಣ ಯಾವಾಗಲೂ ಬೇಡಿಕೆ ಇರುತ್ತದೆ. ಸಹ ಬೆಳೆಗಳ ಗೊಬ್ಬರವನ್ನು ಕಬಳಿಸುವುದಕ್ಕೆ ಇದಕ್ಕೆ ಪ್ರತ್ಯೇಕ ಗೊಬ್ಬರ ಕೊಡಬೇಕು.