ನಮ್ಮ ಸುತ್ತಮುತ್ತ ಎಲ್ಲಾ ಕಡೆಯಲ್ಲಿ ಕಾಣಸಿಗುತ್ತಿದ್ದ ಹುತ್ತಗಳು ಈಗ ಅಪರೂಪವಾಗಲಾರಂಭಿಸಿದೆ. ಇದು ನಮ್ಮ ಹೊಲದ ಮಣ್ಣು ಸಾವಯವ ಅಂಶ ಕಳೆದುಕೊಡಿರುವುದರ ಸೂಚನೆ. ಬಯಲು ಸೀಮೆಯ ಕಡೆ, ಕಾಡು ಇರುವಲ್ಲಿ ಮಾನವ ಹಸ್ತಕ್ಷೇಪ ಇಲ್ಲದ ಕಡೆ ಸ್ವಲ್ಪ ಮಟ್ಟಿಗೆ ಹುತ್ತಗಳು ಕಾಣಸಿಕ್ಕರೆ ಉಳಿದೆಡೆ ಹುತ್ತಗಳಿಲ್ಲ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುತ್ತಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ!
ಹುತ್ತಗಳು ಇಲ್ಲದಿದ್ದರೆ ಗೆದ್ದಳು ಇಲ್ಲವಲ್ಲಾ ಒಳ್ಳೆಯದೇ ಅಯಿತಲ್ಲಾ ಎಂದು ಭಾವಿಸಬೇಡಿ. ಹುತ್ತಗಳು ನಮ್ಮ ಭೂಮಿಯ ಫಲವತ್ತತೆಯ ಸಂಕೇತ. ಹುತ್ತಗಳು ಬೆಳೆಯುವುದು ಭೂಮಿಯಲ್ಲಿರುವ ಸಾವಯವ ವಸ್ತುಗಳನ್ನು ಶಿಥಿಲಗೊಳಿಸಲು. ಗೆದ್ದಳುಗಳು ನಾವು ಗ್ರಹಿಸಿದಂತೆ ಉಪದ್ರವಿ ಜೀವಿಗಳಲ್ಲ. ಉಪಕಾರಿಗಳು. ಹೊಲದಲ್ಲಿ ಗೆದ್ದಳುಗಳು ಇರಬೇಕು. ಆದರೆ ಮನೆಯ ಒಳಗೆ ಬರಬಾರದು ಆಷ್ಟೇ.
ರೈತನ ಮಿತ್ರ ಯಾವುದು ಎಂಬ ಪ್ರಶ್ನೆಗೆ ನೇರ ಉತ್ತರ ಎರೆಹುಳು ಎನ್ನುತ್ತಾರೆ. ವಾಸ್ತವವಾಗಿ ಎರೆಹುಳು ಮಾತ್ರವಲ್ಲ. ಮಣ್ಣಿನಲ್ಲಿರುವ ಕಣ್ಣಿಗೆ ಕಾಣುವ ಮತ್ತು ಕಾಣಿಸದ ಕೊಟ್ಯಾಂತರ ಜೀವರಾಶಿಗಳಲ್ಲಿ ಬಹಳಷ್ಟು ಸಂಖ್ಯೆಯ ಜೀವಿಗಳು ರೈತನ ಮಿತ್ರರು. ಅವುಗಳಲ್ಲಿ ಒಂದು ಗೆದ್ದಳು. ಗೆದ್ದಲಿನ ವಾಸಸ್ಥಾನ ಹುತ್ತ.( termite mounds). ಗೆದ್ದಳುಗಳು ಇತರ ಜೀವಿಗಳಿಗೆ ಹೋಲಿಸಿದರೆ ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಿಗಳು. ಜೇನು ಗೂಡಿನ ತರಹ ಇದೊಂದು ಸಂಘಟಿತ ಸಂಸಾರ. ಇಲ್ಲಿ ರಾಣಿ, ಕೆಲಸಗಾರ, ಹೀಗೆಲ್ಲಾ ವರ್ಗೀಕರಣ ಇರುತ್ತದೆ. ಸೈನಿಕರು ಎಂಬ ಹುಳಗಳಿದ್ದು ಅವುಗಳು ಗೂಡಿನ ರಕ್ಷಣೆಗಾಗಿ ಇರುತ್ತವೆ. ನಿರ್ಮಿಸುತ್ತವೆ. ಕೆಲಸಗಾರ ಹುಳಗಳು ಮನೆಕೆಲಸ (ಗೂಡಿನ ನಿರ್ವಹಣೆ) ಮಾಡುವವವುಗಳು. ಸುತ್ತಾಡುತ್ತಾ ಆಹಾರ ಸಂಗ್ರಹಣೆ ಮಾಡುವುದು,ಸಣ್ಣ ಮರಿಗಳಿಗೆ ಆಹಾರ ಕೊಡುವುದು, ಸಂವಹನ, ಸ್ವಚ್ಚತೆ ಇವೆಲ್ಲಾ ಕೆಲಸಗಾರ ಹುಳದ ಕರ್ತವ್ಯ. ರಾಣಿ ಇಡೀ ಕುಟುಂಬದ ಕೀಲಿ ಇದ್ದಂತೆ. ಎಲ್ಲಾ ಗೆದ್ದಳು ಹುಳಗಳ ತಾಯಿ ರಾಣಿ ಆಗಿರುತ್ತದೆ.ಒಂದು ಹುತ್ತದಲ್ಲಿ ಲಕ್ಷಾಂತರ ಹುಳಗಳಿರುತ್ತವೆ. ಗೆದ್ದುಗಳುಗಳಲ್ಲಿ ಬೇರೆ ವಿಧಗಳಿವೆ. ಹೆಚ್ಚಿನವರು ಇವುಗಳನ್ನು ಹಾನಿಕರಕ ಎಂದು ಭಾವಿಸುತ್ತಾರೆ. ಅದು ತಪ್ಪು ತಿಳುವಳಿಕೆ. ಪ್ರಪಂಚದಾದ್ಯಂತ ಕಂಡುಬರುವ ಗೆದ್ದಳುಗಳಲ್ಲಿ ಕೇವಲ 10% ಮಾತ್ರ ಸ್ವಲ್ಪ ಹಾನಿಮಾಡುವವುಗಳು. ಇವುಗಳಿಂದ ನೆಲದ ಮೇಲಿನ ಸಾವಯವ ವಸ್ತುಗಳು ಕಳಿಯಲ್ಪಟ್ಟು (decopose) ಸಾರಜನಕ, ಇಂಗಾಲ ಮತ್ತು ಆಮ್ಲಜನಕದ ಉತ್ಪಾದನೆಯಾಗುತ್ತದೆ. ಮರಗಳನ್ನು ಕಳಿಯಿಸಿಕೊಡುವ ಜೀವಿಗಳ ಸಂಖ್ಯೆ ಕಡಿಮೆ. ಆ ಕೆಲಸದಲ್ಲಿ ಮಹತ್ತರ ಪಾತ್ರ ಗೆದ್ದಳುಗಳದ್ದು.

ಗೆದ್ದಳುಗಳ ಕೆಲಸ ಏನು?
- ಇವು ಸಾವಯವ ವಸ್ತು ಭಕ್ಷಕಗಳು. ಜೀವಂತ ಇರುವ ಯಾವುದನ್ನೂ ಇವು ತಿನ್ನಲಾರವು.
- ಯಾವುದಾದರೂ ಸಾವಯವ ವಸ್ತು ಹೇರಳವಾಗಿದ್ದ ಕಡೆ ಮಣ್ಣಿನಲ್ಲಿ ಬೆಳೆಯುವ ಹುತ್ತ ಬೆಳೆಯುತ್ತದೆ.
- ಅಲ್ಲಿಯೇ ಸುತ್ತಮುತ್ತ ಅವು ಆಹಾರ ಸಂಗ್ರಹಿಸುತ್ತಾ ಇರುತ್ತವೆ.
- ಹುಲ್ಲುಗಾವಲಿನಲ್ಲಿ ಹುಲ್ಲು ಒಣಗಿದಾಗ ಅದನ್ನು ತಿನ್ನಲು ಗೆದ್ದಲುಗಳು ಬರುತ್ತವೆ.
- ಅವುಗಳನ್ನು ತಿಂದು ಮಣ್ಣು ರೂಪಕ್ಕೆ ಪರಿವರ್ತಿಸಿಕೊಡುತ್ತವೆ.
- ನೀರಿನ ಅಂಶ ಇರುವಲ್ಲಿ ಗೆದ್ದಲುಗಳು ಬರಲಾರವು ಅಲ್ಲಿ ಸಾಮಾನ್ಯವಾಗಿ ಸೂಕ್ಷ್ಮಾಣು ಜೀವಿಗಳು ಕಳಿಯಿಸುವ ಕೆಲಸ ಮಾಡುತ್ತವೆ.
- ಗೆದ್ದಲುಗಳು ಅದರಲ್ಲೂ ಹುತ್ತ ಮಾಡಿ ಅದರೊಳಗೆ ಬದುಕುವ ಗೆದ್ದಲುಗಳಿಂದ ಯಾವ ಉಪಟಳವೂ ಇಲ್ಲ.
- ಕೆಲವು ಮರದ ಒಳಗಡೆ ಸೇರಿ ಅಲ್ಲಿ ಕೊರೆಯುತ್ತಾ ಅಲ್ಲೇ ವಾಸಸ್ಥಾನ ಮಾಡುವವುಗಳು ಇವೆ ಇವು ವಿನಾಶಕಾರೀ ಗೆದ್ದಲುಗಳು.
- ಕೆಲವು ಗೊಡೆ ಮತ್ತು ಮರದ ಮೇಲೆ ಕಡ್ಡಿಯ ತರಹ ಮಣ್ಣಿನ ಬಿಲಗಳನ್ನು ಮಾಡಿಕೊಂಡು ಬಹಳಷ್ಟು ದೂರದ ತನಕ ಸಂಚರಿಸುತ್ತಾ ಹೋಗುತ್ತವೆ.
- ಹೋಗುವ ದಾರಿ ಮಧ್ಯೆ ತಮ್ಮ ಪ್ರಿಯ ಅಹಾರ ಇದ್ದರೆ ಅದರಲ್ಲೂ ಮೆದು ಮರಗಳಿದ್ದರೆ ಅದನ್ನು ಭಕ್ಷಣೆ ಮಾಡುತ್ತಾ ಸಾಗುತ್ತವೆ.
- ಗೆದ್ದಲುಗಳು ತಿರುಳು ಮರವನ್ನು ತಿನ್ನುವುದು ಅಪರೂಪ.
- ಕೆಲವು ಗೆದ್ದಲಿನಂತೆ ಕಂಡರೂ ಅವು ಬಿಳಿ ಇರುವೆಗಳಾಗಿರುತ್ತವೆ. ಇವು ಹಾನಿ ಕಾರಕಗಳಾಗಿರುತ್ತವೆ.
ಕೆಲವು ತಪ್ಪು ಗ್ರಹಿಕೆಗಳು:
- ಮರದ ಬುಡದಲ್ಲಿ ಗೆದ್ದಳು ಇದ್ದರೆ ಆ ಮರ ಸಾಯುತ್ತದೆ ಎಂದು ತಿಳಿದವರಿದ್ದಾರೆ. ಅದು ಸರಿಯಲ್ಲ.
- ಗೆದ್ದಳಿಗೆ ಬೇಕಾದ ಆಹಾರ ಅಲ್ಲಿ ಸಿಗುವ ತನಕ ಅದು ಅಲ್ಲಿ ಇರುತ್ತದೆ.
- ಹಸಿ ಮರದ ಭಾಗಗಳನ್ನು ಅದು ಕೊರೆಯುವುದಿಲ್ಲ.
- ಗೆದ್ದಳು ಗೂಡು ಹುತ್ತ ಇರುವಲ್ಲಿ ನೀರು ಇರುತ್ತದೆ ಎಂಬುದಾಗಿ ಕೆಲವರು ಹೇಳುವುದುಂಟು.
- ಅದು ನಿಜವಲ್ಲ. ಗೆದ್ದಳು ಗೂಡು ಸದಾ ಹಸಿಯಾಗಿರುವುದಕ್ಕೆ ಕಾರಣ ಅವುಗಳು ತಮ್ಮ ದೇಹದ ಒಳಗೆ ಸಾವಯವ ವಸ್ತು ಮತ್ತು ಮಣ್ಣನ್ನು ಸೇವಿಸಿ ತನ್ನ ದೇಹದ ರಸವನ್ನು ಮಿಶ್ರಣ ಮಾಡಿದ್ದರಿಂದ ಅದು ಹಸಿಯಾಗಿರುತ್ತದೆ.
- ಅವು ಬರೇ ಮಣ್ಣು ಮತ್ತು ಸಾವಯವ ವಸ್ತುಗಳನ್ನು ಮಾತ್ರ ಸೇವಿಸುವ ಕಾರಣ ಅದು ಹೊರ ಹಾಕಿ ನಿರ್ಮಿಸಿದ ಮನೆ (ಗೂಡು)ಯ ಮಣ್ಣು ಮೆಕ್ಕ್ಕಲು ಮಣ್ಣಾಗಿರುತ್ತದೆ.
- ಇದರಲ್ಲಿ ಮರಳಿನ ಅಂಶವೇ ಇರುವುದಿಲ್ಲ.
- ಗೆದ್ದಳು ಬಂತು ಎಂದು ಹುತ್ತಕ್ಕೆ ವಿಷ ಹಾಕುವುದು ಮಾಡಬಾರದು.
- ಗೆದ್ದಳಿನ ಹುತ್ತ ಶಾಶ್ವತ ಅಲ್ಲ. ಅವು ಜೇನು ಕುಟುಂಬದಂತೆ ನಶಿಸಿ ಹೋಗುತ್ತವೆ.
- ಆಗ ಬರೇ ಅವುಗಳ ಗೂಡು ಮಾತ್ರ ಉಳಿಯುತ್ತದೆ. ಅದರಲ್ಲಿ ಹುಳಗಳು ಇರುವುದಿಲ್ಲ.
- ಅಂತಹ ಹುತ್ತದಲ್ಲಿ ಬೆಚ್ಚಗಿನ ವಾತಾವರಣ ಮತ್ತು ಸುರಕ್ಷತೆ ಇದೆ ಎಂದು ಹಾವುಗಳು ಅವಿತುಕೊಳ್ಳುವುದು ಇರುತ್ತದೆ.
- ಅದೂ ಸಹ ತಾತ್ಕಾಲಿಕ.
ಹುತ್ತದ ಮಣ್ಣಿನ ಉಪಯೋಗಗಳು:
- ನಿಮ್ಮ ಜಾಗದಲ್ಲಿ ಎಲ್ಲಿಯಾದರೂ ಹುತ್ತ ಇದ್ದರೆ ಅದರಲ್ಲಿ ಒಂದು ಹಲಸಿನ ಬೀಜ ಅಥವಾ ಮಾವಿನ ಬೀಜವನ್ನು ಹಾಕಿ.
- ಅದರ ಮೊಳಕೆ ಬರುವಿಕೆ ಮತ್ತು ನಂತರದ ಬೆಳವಣಿಗೆಯನ್ನು ಗಮನಿಸಿ.
- ಉಳಿದ ಯಾವ ಜಾಗದಲ್ಲಿ ನೆಟ್ಟರೂ ಆ ತರಹ ಬೆಳೆಯಲಾರದು.
- ನಮ್ಮ ತಂದೆಯವರು ಒಂದು ಹುತ್ತದಕ್ಕೆ ಹಲಸಿನ ಬೀಜವನ್ನು ಹಾಕಿ ಅಲ್ಲಿ ಬೆಳೆದ ಮರವನ್ನು ಕೇವಲ 35 ವರ್ಷಗಳಲ್ಲಿ ಕಡಿದು ಮನೆಗೆ ಬೇಕಾದ ಎರಡು ಬಾಗಿಲು ಚೌಕಟ್ಟು. ಎರಡು ಬಾಗಿಲಿನ ಹಲಗೆಯನ್ನು ಜೊತೆಗೆ ಕೆಲವು ಪೀಟೋಪಕರಣಕ್ಕೆ ಬೇಕಾದ ಮರವನ್ನೂ ಪಡೆದಿದ್ದಾರೆ.
- ಹುತ್ತದ ಮಣ್ಣು ಒಂದು ರೀತಿಯಲ್ಲಿ ಗೊಬ್ಬರ ಎಂದೇ ಹೇಳಬಹುದು.
- ಹುತ್ತ ಬೆಳೆಯುವಲ್ಲಿ ಇರುವ ಮಣ್ಣು ಸಹ ಫಲವತ್ತತೆಯಿಂದ ಕೂಡಿರುತ್ತದೆ ಎನ್ನಬಹುದು.
- ಆಪ್ರೀಕಾದ ಕೆಲವು ಕಡೇ ಹುತ್ತದ ಮಣ್ಣನ್ನು ಗೊಬ್ಬರವಾಗಿ ಬಳಸುತ್ತಾರೆ.
- ನಾವೂ ಬಳಸಬಹುದು. ಇದಕ್ಕೆ ನೀರು ಹಿಡಿದಿಟ್ಟುಕೊಳ್ಳುವ ಗುಣ ಇರುತ್ತದೆ.
- ಸೂಕ್ಷ್ಮಾಣುಜೀವಿಗಳ ಬದುಕುವಿಕೆಗೆ ಬೇಕಾದ ಆಹಾರ ಸಹ ಇರುತ್ತದೆ.
- ಹುತ್ತದ ಮಣ್ಣಿನಲ್ಲಿ ರಂಜಕದ ಅಂಶ ಚೆನ್ನಾಗಿರುವ ಕಾರಣ ಮಣ್ಣು ಫಲವತ್ತಾಗಿಸಲು ಇದನ್ನು ಬಳಸಬಹುದು.
- ಮಣ್ಣು ಸಡಿಲ ಆದಷ್ಟೂ ಅದರ ರಚನೆ ಚೆನ್ನಾಗಿರುತ್ತದೆ. ಮಣ್ಣಿನಲ್ಲಿ ರಂದ್ರಗಳಿದ್ದು, ಸಡಿಲವಾಗಿರಬೇಕು.
- ಗೆದ್ದಳುಗಳ ಗೂಡಿನ ಮಣ್ಣು ಭೌತಿಕವಾಗಿ , ಜೈವಿಕವಾಗಿ ಮತ್ತು ರಾಸಾಯನಿಕವಾಗಿ ಉತ್ತಮವಾಗಿರುತ್ತದೆ.
- ಹುತ್ತದ ಮಣ್ಣಿನಲ್ಲಿ ಮರಳಿನ ಅಂಶ ಇರುವುದಿಲ್ಲ. ಹಾಗಾಗಿ ಅದನ್ನು ಮೆಕ್ಕಲು ಮಣ್ಣು ಎಂದೇ ಕರೆಯಬಹುದು.
- ಇದನ್ನು ಹಿಂದೆ ಒಲೆ ತಯಾರಿಸಲು ಬಳಕೆ ಮಾಡುತ್ತಿದ್ದರು.
- ಗೆದ್ದಳು ತಿಂದ ಮಣ್ಣು ಸಾವಯವ ವಸ್ತುಗಳನ್ನು ಜೀರ್ಣಿಸಿ ಹೊರಬಂದ ಮಣ್ಣು ಆಗಿದ್ದು, ಅದರಲ್ಲಿ ಪೋಷಕಗಳು ಹೆಚ್ಚಾಗಿರುತ್ತವೆ.
ಹುತ್ತಗಳು ಕಡಿಮೆಯಾಗಲು ಕಾರಣ:
- ಮರಮಟ್ಟುಗಳ ನಾಶವೇ ಹುತ್ತಗಳು ಕಡಿಮೆಯಾಗಲು ಕಾರಣ.
- ಹಿಂದೆ ಮರಮಟ್ಟು ಹೇರಳವಾಗಿತ್ತು. ಆಗ ಮನುಷ್ಯ ತನ್ನ ಬಳಕೆಗೆ ಬೇಕಾದಷ್ಟನ್ನು ಬಳಸಿಕೊಂಡು ಉಳಿದವುಗಳನ್ನು ಅಲ್ಲೇ ಬಿಡುತ್ತಿದ್ದ.
- ಆದು ಒಣಗಿ ಶಿಥಿಲವಾಗುವಾಗ ಗೆದ್ದಲುಗಳಿಗೆ ಆಹಾರ ಸಿಗುತ್ತಿತ್ತು.
- ಸತ್ತ ಮರದ ಬೇರುಗಳ ಬಾಗವೂ ಅವುಗಳ ಆಹಾರಕ್ಕೆ ಆಶ್ರಯಕ್ಕೆ ನೆರವಾಗುತ್ತಿತ್ತು.
- ಈಗ ಮರಮಟ್ಟುಗಳನ್ನು ಮೂಲಕ ಬೇರು ಸಮೇತ ಕೀಳುತ್ತೇವೆ.
- ಮರಮಟ್ಟುಗಳ ಸಂಖ್ಯೆಯೇ ಕಡಿಮೆಯಾಗಿದೆ. ಮಣ್ಣು ಅಗೆಯುವ ಯಂತ್ರೋಪಕರಣಗಳು ಬಂದ ಮೇಲೆ ಹುತ್ತಗಳ ಅವನತಿ ಪ್ರಾರಂಭವಾಯಿತು.
ಮಣ್ಣಿನ ಫಲವತ್ತತೆ ವೃದ್ದಿಯ ದೃಷ್ಟಿಯಿಂದ ಹುತ್ತಗಳ ಪಾತ್ರ ಮಹತ್ವದ್ದು. ಕಣ್ಣಂದಾಜಿನಲ್ಲಿ ನಿಮ್ಮ ಹೊಲದ ಮಣ್ಣಿನ ಪರೀಕ್ಷೆ ಮಾಡುವುದಾದರೆ ಮೊದಲು ಅಲ್ಲಿ ಹುತ್ತಗಳ ಇರುವಿಕೆಯನ್ನು ಗುರುತಿಸಿ. ಹುತ್ತಗಳು ಇಲ್ಲವಾದರೆ ಸಾವಯವ ಇಂಗಾಲ ಅಂಶ ತೀರಾ ಕಡಿಮೆ ಇರುವ ಮಣ್ಣು ಎಂದು ತಿಳಿಯಬಹುದು. ಸಾವಯವ ಇಂಗಾಲ ಇಲ್ಲದಿರುವ ಮಣ್ಣು ಫಲವತ್ತಾಗಿರುವುದಿಲ್ಲ