ಕುಂಟು ನೇರಳೆ, ಕುಂಟಾಲ ಎಂಬ ಕಾಡು ಸಸ್ಯ ಒಂದು ಕಾಲದಲ್ಲಿ ಎಲ್ಲಾ ಕಡೆಯಲ್ಲೂ ಕಾಣಸಿಗುತ್ತಿದ್ದ ಸಸ್ಯವಾಗಿತ್ತು. ಈಗ ಅದು ಭಾರೀ ಕ್ಷೀಣಗೊಳ್ಳುತ್ತಿದ್ದು, ಪರಿಸರದ ಅಸಮತೋಲನಕ್ಕೆ ಇದೂ ಒಂದು ಕಾರಣವಾಗಿದೆ. ಈ ಸಸ್ಯವನ್ನು ಅವಲಂಭಿಸಿ ಬದುಕುವ ಒಂದಷ್ಟು ಜೀವಿಗಳು ಆಹಾರವಿಲ್ಲದೆ ಬೇರೆ ಬೆಳೆ ಆಶ್ರಯಿಸುವಂತಾಗಿದೆ.
ಕುಂಟು ನೇರಳೆ, ಅಥವಾ ಕುಂಟಾಲ ಇದು ನೇರಳೆ ಜಾತಿಯ ಸಸ್ಯವಾಗಿದ್ದು, ಹಿಂದೆ ಎಲ್ಲಾ ಕಡೆ ಇದರ ಸಸ್ಯಗಳು, ಮರಗಳು ಇದ್ದವು.ಇದರ ವೈಜ್ಞಾನಿಕ ಹೆಸರು Syzygium caryophyllatum , ಹೆಚ್ಚು ಎತ್ತರಕ್ಕೆ ಬೆಳೆಯದ ಸಾಧಾರಣ ಸಸ್ಯ ಇದು. ಈ ಎಲ್ಲಾ ಹೆಸರುಗಳಿಂದ Jamun, jambolan, jambolan plum, Jambul, black plum, java plum, Indian blackberry, Portuguese plum, Malabar plum, purple plum, damson plum, Duhat Jambu, and damson plum. ಇದನ್ನು ಕರೆಯುತ್ತಾರೆ. ವರ್ಷಪೂರ್ತಿ ಎಲೆಗಳನ್ನು ಉಳಿಸಿಕೊಂಡು ಬೆಳೆಯುವ ಈ ಸಸ್ಯ ಮಾರ್ಚ್ ತಿಂಗಳಿಂದ ಹೂ ಬಿಡಲು ಪ್ರಾರಂಭವಾಗಿ ಜೂನ್ ತನಕ ಹಣ್ಣನ್ನು ಹೊಂದಿರುತ್ತದೆ. ಇದರ ಹಣ್ಣು ನೇರಳೆ ಬಣ್ಣದಲ್ಲಿದ್ದು, ತಿನ್ನುವ ಹಣ್ಣಾಗಿರುತ್ತದೆ. ನೇರಳೆ ಮರ ದೈತ್ಯ ಗಾತ್ರದ ಮರವಾದರೆ ಇದು ಸ್ವಲ್ಪ ಕುಬ್ಜ, ಹಾಗಾಗಿ ಇದಕ್ಕೆ ಕುಂಟು ನೇರಳೆ ಎಂಬ ಹೆಸರು ಬಂದಿರಬಹುದು. ಕರಾವಳಿ ತೀರದ ಮತ್ತು ಮಲೆನಾಡಿನ ಕುರುಚಲು ಸಸ್ಯವರ್ಗ ಬೆಳೆಯುವ ಸಾಮಾನ್ಯ ಕಾಡಿನಲ್ಲಿ, ನಿರುಪಯುಕ್ತ ಭೂಮಿಯಲ್ಲಿ ಇದರ ಸಸ್ಯಗಳು ಇರುತ್ತಿದ್ದವು ಈಗ ಇವು ನಮ್ಮ ಕೃಷಿ ವಿಸ್ತರಣೆ ಮತ್ತು ಇನ್ನಿತರ ಕಾರಣಗಳಿಂದ ಕ್ಷೀಣಿಸಲಾರಂಭಿಸಿದೆ. ಕೆಲವು ಕಡೆ ಅಲ್ಪ ಸ್ವಲ್ಪ ಇದೆಯಾದರೂ ಹಿಂದಿಗಿಂತ ಈಗ 90% ಕಡಿಮೆಯಾಗಿದೆ ಎಂದರೂ ತಪ್ಪಾಗಲಾರದು.
ಕುಂಟಾಲ ಹಣ್ಣು ತಿಂದ ನೆನಪು:
- ನಾವು ಶಾಲೆಗೆ ಹೋಗುವಾಗ ಮತ್ತು ಬರುವಾಗ ದಾರಿಯುದ್ದಕ್ಕೂ ಸಿಕ್ಕ ಸಿಕ್ಕಲ್ಲಿ ಕುಂಟು ನೇರಳೆ ಹಣ್ಣು,ಮುಳ್ಳು ಹಣ್ಣು ಮುಂತಾದವುಗಳನ್ನು ತಿನ್ನುತ್ತಾ ಹೋಗುತ್ತಿದ್ದೆವು.
- ಆಗ ಎಲ್ಲಿ ನೋಡಿದರಲ್ಲಿ ಇದರ ಸಸಿಗಳು ಇರುತ್ತಿದ್ದವು.
- ಕೆಲವೊಮ್ಮೆ ತಿಂದದ್ದು ಹೆಚ್ಚಾಗಿ ವಾಂತಿ ಮಾಡಿದ್ದೂ ಇದೆ.
- ನಾವು ತಿಂದ ಹಣ್ಣಿನ ಬೀಜವನ್ನು ಉಗುಳಿದ್ದು, ಹಕ್ಕಿಗಳು ತಿಂದು ಹಿಕ್ಕೆ ಹಾಕಿದ್ದು, ಮರದಲ್ಲಿ ಪಕ್ವವಾಗಿ ಉದುರಿದ್ದು, ಅಲ್ಲಲ್ಲಿ ಹುಟ್ಟಿ ಮತ್ತೆ ಸಸಿಯಾಗುತ್ತಿತ್ತು.
- ಆಗಲೂ ಜನ ಹಸುಗಳ ಕಾಲಿನ ಅಡಿಯ ಸತ್ತೆಯ ಸೊಪ್ಪಿಗಾಗಿ ಇದರ ಗೆಲ್ಲು ಸವರುತ್ತಿದ್ದರು.
- ಉರುವಲಿಗಾಗಿಯೂ ಕಡಿಯುತ್ತಿದ್ದರು, ಆದರೂ ಅದು ಮತ್ತೆ ಚಿಗುರಿ ಬೆಳೆಯುತ್ತಿತ್ತು.
- ಕುಂಟಾಲ ಹಣ್ಣು ಮಳೆಗಾಲಕ್ಕೆ ಮುಂಚೆ ತಿನ್ನಲು ರುಚಿ.
- ಸ್ವಲ್ಪ ಸಿಹಿ ಇರುತ್ತದೆ. ಆರೋಗ್ಯಕ್ಕೆ ಯಾವ ಹಾನಿಯೂ ಇಲ್ಲ.
- ಈಗ ಈ ಹಣ್ಣಿಗೆ ಮಹತ್ವ ಬಂದಿದೆ.
- ಇದನ್ನು ತಿನ್ನುವುದರಿಂದ ಸಿಹಿ ಮೂತ್ರ ಖಾಯಿಲೆಯ ಉಪಶಮನಕ್ಕೂ ಒಳ್ಳೆಯದು ಎನ್ನುತ್ತದೆ ಸಂಶೋಧನೆಗಳು.
- ಎಲೆ,ಕಾಯಿ ಚೆಕ್ಕೆಯಲ್ಲಿ ಬೇರೆ ಬೇರೆ ಔಷಧೀಯ ಗುಣ ಇದೆ.
- ಎಲೆಯನ್ನು ಹರ್ಬಲ್ ಟೀ ಗೆ ಬಳಸುತ್ತಾರೆ. ಎಲೆಯ ಕಷಾಯ ಮಾಡಿ ಕುಡಿಯುತ್ತಿದ್ದರು.

ಪರಾಗದಾನಿಗಳು ಮತ್ತು ಕುಂಟು ನೇರಳೆ:
- ಹಿಂದೆ ಜೇನು ಸಾಕಣೆ ಮಾಡುವವರಿಗೆ ಪ್ರಮುಖ ಹೂವಿನ ಸಸ್ಯ ಎಂದರೆ ಕುಂಟುನೇರಳೆ.
- ಆಗ ಅದಲ್ಲದೆ ಬೇರೆ ಬೇರೆ ಮರಗಳೂ ಇದ್ದವು.
- ಮೊದಲಾಗಿ ನೊರೆಕಾಯಿ( ಆಂಟುವಾಳದ) ಜೇನು ತದನಂತರ ಪ್ರಾರಂಭವಾಗುತ್ತಿದ್ದುದು ಕುಂಟು ನೇರಳೆ.
- ಎಲ್ಲಾ ಕಡೆಗಳಲ್ಲೂ ಸಸ್ಯಗಳು ಇರುತ್ತಿದ್ದ ಕಾರಣ 15 ದಿನಕ್ಕೊಮ್ಮೆ ಜೇನು ತೆಗೆಯಲು ಸಿಗುತ್ತಿತ್ತು.
- ಜೇನು ನೊಣಗಳಲ್ಲದೆ ಹಲವಾರು ಪರಾಗದಾನಿಗಳಿಗೆ ಈ ಕುಂಟು ನೇರಳೆ ಆಶ್ರಯವಾಗಿರುತ್ತಿತ್ತು.
- ಆಗ ಆಹಾರದ ಲಭ್ಯತೆ ಇದ್ದ ಕಾರಣ ಜೇನು ಕುಟುಂಬಗಳು ಪೆಟ್ಟಿಗೆಯಲ್ಲಿ ಅಲ್ಲದೆ ಹುತ್ತ, ಮರದ ಪೊಟರೆಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತಿತ್ತು.
- ಕುಂಟು ನೇರಳೆ ಅಪರೂಪವಾದ ನಂತರ ಜೇನು ನೊಣಗಳಿಗೆ ಕಾಲಬದ್ಧವಾದ ಮಧು ಸಿಗುವ ನೈಸರ್ಗಿಕ ಹೂವುಗಳೇ ಇಲ್ಲದಾಯಿತು.
- ಸ್ವಲ್ಪ ಮಟ್ಟಿಗೆ ರಬ್ಬರ್ ಎಲೆಯ ರಸ ಸ್ರಾವ ಜೇನಿಗೆ ಆಕರವಾಯಿತು.
- ಈಗೀಗ ಜೇನು ಸಾಕುವವರು ಸಕ್ಕರೆ ದ್ರಾವಣ ತಿನ್ನಿಸಿಯೇ ಜೇನು ಉತ್ಪಾದನೆ ಮಾಡುವ ಸ್ಥಿತಿ ಬಂದಿದೆ.
ಕುಂಟು ನೇರಳೆ ಸೊಪ್ಪು ಮತ್ತು ಕೃಷಿ.
- ಕುಂಟು ನೇರಳೆ ಸೊಪ್ಪು ಉತ್ತಮ ಹಸುರು ಸೊಪ್ಪು.
- ದಪ್ಪ ಸೊಪ್ಪು ಹಾಗೂ ಉತ್ತಮ ಟ್ಯಾನಿನ್ ಆಂಶ ಇರುವ ಕಾರಣ ಎರೆಹುಳಗಳಿಗೆ ಉತ್ತಮ ಆಹಾರವಾಗುತ್ತಿತ್ತು.
- ಹಾಗಾಗಿ ಮಣ್ಣಿನ ಫಲವತ್ತತೆ ಸಹ ಹೆಚ್ಚಾಗುತ್ತಿತ್ತು.
- ಆಗ ರೈತರು ಹಸು ಸಾಕಣೆ ತಪ್ಪದೆ ಮಾಡುತ್ತಿದ್ದರು.
- ಹಸುಗಳ ಕಾಲ ಬುಡಕ್ಕೆ ಕುಂಟು ನೇರಳೆ ಸೊಪ್ಪು, ಹಾಗೆಯೇ ಇನ್ನಿತರ ಸೊಪ್ಪನ್ನು ಹಾಕುತ್ತಿದ್ದರು.
- ಕೆಲವು ಹಸುಗಳು ಇದನ್ನು ತಿನ್ನುತ್ತಲೂ ಇದ್ದವು. ಇದು ಉತ್ತಮ ಗೊಬ್ಬರವಾಗಿ ಸಿಗುತ್ತಿತ್ತು.
- ಕೃಷಿಕರಿಗೆ ಹಸುರೆಲೆ ಸೊಪ್ಪಿಗೆ ಉತ್ತಮ ಮೂಲವಾಗಿರುವುದರ ಜೊತೆಗೆ ಕಟ್ಟಿಗೆಗೂ ಇದನ್ನೇ ಬಳಸುತ್ತಿದ್ದರು.
- ವರ್ಷ ವರ್ಷವೂ ಕಟ್ಟಿಗೆಗೆ ಕಡಿದು ಮರಗಳು ಕಡಿಮೆಯಾದವು.

ನಾಶಕ್ಕೆ ಕಾರಣ:
- ಹೇರಳವಾಗಿದ್ದ ಈ ಸಸ್ಯ ಜನ ಸೊಪ್ಪು ಕಡಿದೂ ನಾಶವಾಗಲಿಲ್ಲ.
- ಕಟ್ಟಿಗೆ ಕಡಿದೂ ನಾಶವಾಗಲಿಲ್ಲ. ಕಾರಣ ಅವರು ಬುಡ ಉಳಿಸಿ ಕಡಿದಿದ್ದರು.
- ಯಾವಾಗ ಯಂತ್ರಗಳ ಮೂಲಕ ಮಣ್ಣು ಅಗೆದು ಕೃಷಿ ಪ್ರಾರಂಭವಾಯಿತೋ ಆಗ ಇದರ ನಾಶ ಪ್ರಾರಂಭವಾಯಿತು.
- ರಬ್ಬರ್ ಬೆಳೆ. ಅಡಿಕೆ ಕೃಷಿ, ಭೂ ಆತಿಕ್ರಮಣ ಇವೆಲ್ಲವೂ ಕುಂಟು ನೇರಳೆ ಸಸ್ಯವನ್ನು ಹಾಗೆಯೇ ಇನ್ನಿತರ ಸಸ್ಯಗಳನ್ನು ಬಲಿ ಪಡೆಯಿತು.
- ರಬ್ಬರ್ ತೋಟಕ್ಕೆ ಪರಿಚಯಿಸಲ್ಪಟ್ಟ ಮುಚ್ಚಲು ಬೆಳೆ (Rubber cover crop) ಹಾಗೆಯೇ
- ಎಲ್ಲೆಂದರಲ್ಲಿ ಬೆಳೆಯುವ ನರೆ ಬಳ್ಳಿ (Diascoria),ಕೆಲವು ಬಳ್ಳಿ ಜಾತಿಯ ಕಳೆ ಸಸ್ಯಗಳು
- ಇತರ ಸಸ್ಯವರ್ಗದ ಮೇಲೆ ಬೆಳೆದು ಅದರ ಬೆಳವಣಿಗೆಯನ್ನು ಹತ್ತಿಕ್ಕಿದವು.
- ಇದರಿಂದಾಗಿ ಹಲವಾರು ಸಸ್ಯ ವೈವಿಧ್ಯಗಳು ಸತ್ತು ಹೋಗುವ ಸ್ಥಿತಿ ಬಂತು.
- ಇದಕ್ಕೆ ಸಂಬಂಧಿಸಿದವರು ಗಮನಿಸಿದ್ದಾರೆಯೋ ಇಲ್ಲವೋ, ದಕ್ಷಿಣ ಕನ್ನಡ ಸೇರಿದಂತೆ ಮಲೆನಾಡಿನಲ್ಲಿ
- ಇಂತಹ ಹಲವಾರು ಸಸ್ಯ ವೈವಿಧ್ಯಗಳು ಈಗ ವಿನಾಶದ ಅಂಚಿಗೆ ತಲುಪಿದ್ದು ಇದೇ ಕಾರಣದಿಂದ.
- ಬಂಟ್ವಾಳ ತಾಲೂಕಿನ ಕಾರಿಂಜದ ರಕ್ಷಿತಾರಣ್ಯದಲ್ಲಿ ಮರದ ಮೇಲೆ ಹಬ್ಬಿರುವ ಕೆಲವು ಬಳ್ಳಿಗಳು ಸಧ್ಯವೇ ಕಾಡನ್ನು ಬಲಿ ಪಡೆದರೂ ಅಚ್ಚರಿ ಇಲ್ಲ.
- ನೀವೂ ಬೆಟ್ಟ ಹತ್ತಿ ಒಮ್ಮೆ ಗಮನಿಸಿ! ಇವೆಲ್ಲಾ ಆಗಿರುವುದು ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯದಿಂದಾಗಿ.
ಸಸ್ಯ ವೈವಿಧ್ಯಗಳ ನಾಶ ಒಂದು ದೃಷ್ಟಿಯಲ್ಲಿ ಕೃಷಿಕರಿಗೆ ದೊಡ್ಡ ಆತಂಕ. ಕೆಲವು ಸಸ್ಯಗಳಲ್ಲಿ ಆಶ್ರಯ ಪಡೆದ ಕೀಟಗಳು, ಇನ್ನಿತರ ಜೀವಿಗಳು ಬೇರೆ ಆಶ್ರಯ ಹುಡುಕುವಂತಾಯಿತು. ಪಕ್ಷಿ, ಕೋತಿ, ಅಳಿಲು, ಮುಂತಾದವುಗಳು ರೈತರ ಬೆಳೆಗೆ ತೊಂದರೆ ಮಾಡುವಂತಾಯಿತು. ಕೀಟ ಬಾಧೆ ಹೆಚ್ಚಳವಾಯಿತು. ಮಣ್ಣಿನ ಫಲವತ್ತತೆ ಕ್ಷೀಣಿಸಲಾರಂಭಿಸಿತು. ಇನ್ನಾದರೂ ಅರಣ್ಯ ಮತ್ತು ಜೀವಿ ಪರಿಸ್ಥಿತಿ ಇಲಾಖೆ ಇದನ್ನು ಗಮನಿಸಬೇಕು. ಖಾಲಿ ಸ್ಥಳಗಳ ಅತಿಕ್ರಮವನ್ನು ನಿಲ್ಲಿಸಿ ಅಲ್ಲಿ ಮಾನವ ಹಸ್ತಕ್ಷೇಪ ನಿಂತರೆ ಎಲ್ಲವೂ ಸರಿಯಾಗುತ್ತದೆ.
ಪರಿಸರ ಹಾಳಾದರೆ ಮನುಕುಲಕ್ಕೆ ಆತಂಕ:
- ನಾವು ಬದುಕುವುದಷ್ಟೇ ಅಲ್ಲ. ನಮ್ಮ ಮುಂದಿನ ತಲೆಮಾರೂ ಸಹ ಬದುಕಬೇಕು.
- ಅದಕ್ಕೆ ನಾವು ಆಸ್ಪದ ಕೊಡಬೇಕು. ನಾವು ಮಾಡದಿದ್ದರೆ ಪ್ರಕೃತಿ ತನ್ನ ಉಳಿವಿಗೆ ಬೇಕಾದ ಕ್ರಮವನ್ನು ತಾನೇ ಕೈಗೊಳ್ಳುತ್ತದೆ.
- ಅದು ವಿನಾಶಕಾರಿಯಾಗಿರುತ್ತದೆ! ಕುಂಟುನೇರಳೆ ಒಂದು ಉದಾಹರಣೆ.
- ಹಾಗೆಯೇ ಅನೇಕಾನೇಕ ಸಸ್ಯ ಜೀವ ವೈವಿಧ್ಯಗಳು ಇತ್ತೀಚಿನ ದಿನಗಳಲ್ಲಿ ಕಾಣದಾಗುತ್ತಿವೆ.
- ಅದನ್ನೇ ಆಶ್ರಯ (Host)ಮಾಡಿಕೊಂಡಿದ್ದ ಮತ್ತೆ ಕೆಲವು ಜೀವಿಗಳು ಅತಂತ್ರವಾಗಿದೆ.
- ಇನ್ನೂ ಒಂದು ಸಂಗತಿಯನ್ನು ಹೇಳಬೇಕೆಂದರೆ ಕೆಲವು ಸಸ್ಯಗಳ ಬೇರಿನ ಜೊತೆಗೆ ಸಹಜೀವನ ನಡೆಸಿ ರೋಗರಕ್ಷಕವಾಗಿ ಕೆಲಸ ಮಾಡುವ ಮಣ್ಣಿನ ಉಪಕಾರೀ ಜೀವಾಣುಗಳು ಸಹ ಹೋಸ್ಟ್ ಸಸ್ಯಗಳಿಲ್ಲದೆ ಕಡಿಮೆಯಾಗುತ್ತಿದೆ.
- ಇವೆಲ್ಲವೂ ನಮ್ಮ ಪರಿಸರದ ಸಮತೋಲನ ದೃಷ್ಟಿಯಿಂದ ಮಹತ್ವ ಪಡೆದಿವೆ.
- ಪ್ರತೀಯೊಂದೂ ಒಂದಕ್ಕೊಂದು ಕೊಂಡಿಯಾಗಿವೆ. ಹಾಗಾಗಿ ಒಮ್ಮೆ ಅವನತಿಯತ್ತ ಸಾಗಿದರೆ ಮತ್ತೆ ಅದು ಸರಿಯಾಗುವುದಿಲ್ಲ.
ಪರಿಸರದ ಉಳಿಸುವ ಬಗ್ಗೆ ಮಾತಾಡುವುದು ಸ್ವಾರ್ಥ ಅಲ್ಲ.ಇದು ಕೆಲವರ ಸಾಮಾಜಿಕ ಕಳಕಳಿ. ಇಂದಿನ ಕಾಲದಲ್ಲಿ ಇದನ್ನು ವ್ಯಕ್ತಿಗತವಾಗಿ ಮಾತನಾಡಿದರೆ ಫಲವಿಲ್ಲ. ಸಂಬಂಧಿಸಿದ ಇಲಾಖೆಗಳೇ ಅದನ್ನು ಅರಿತು ಮಾಡಿದರೆ ಮಾತ್ರ ಯಶಸ್ಸು.