ಆಟಿ ಅಥವಾ ಆಷಾಡ ಮಾಸದ ಅಮವಾಸ್ಯೆಯಂದು ಬೆಳ್ಳಂಬೆಳಗ್ಗೆ ಪಾಲೆ/ ಮದ್ದಾಲೆ ಮರದ ಚೆಕ್ಕೆಯನ್ನು ತೆಗೆದು ಅದರ ರಸವನ್ನು ಸೇವಿಸುವ ಅನಾದಿ ಕಾಲದ ಕ್ರಮದ ಕುರಿತಾಗಿ, ಯಾಕೆ ಏನು ಎಂಬ ಕುತೂಹಲ ಇದ್ದವರಿಗೆ ಸಮಯೋಚಿತವಾಗಿ ವೈಜ್ಞಾನಿಕ ಅಂಶಗಳ ಅನಾವರಣ ಇಲ್ಲಿದೆ. ಓದಿಕೊಂಡು ಭಕ್ತಿ ಭಾವದಿಂದ ಇದನ್ನು ಮಾಡಿ.
ಪಾಲೆ ಕೆತ್ತೆ ರಸ ಸೇವನೆಗೆ ಜಾತಿ ಧರ್ಮದ ಯಾವ ಅಬ್ಯಂತರವೂ ಇಲ್ಲ. ಇದು ಮಾನವನ ಆರೋಗ್ಯ ದೃಷ್ಟಿಯಿಂದ ಹಿರಿಯರು ಮಾಡಿಕೊಂಡು ಬಂದ ಕ್ರಮ. ಬಹುಶಃ ನಮ್ಮ ಹಿರಿಯರು ವೈಜ್ಞಾನಿಕ ಶಿಕ್ಷಣ ಪಡೆಯದೆ ಇರಬಹುದು. ಆದರೆ ಅವರ ಎಲ್ಲಾ ಆಚರಣೆಗಳು ಮತ್ತು ವಿಚಾರಗಳಲ್ಲಿ ಅರ್ಥಗರ್ಭಿತವಾದ ವೈಜ್ಞಾನಿಕತೆ ಇದೆ. ಜನ ಉತ್ತಮ ವಿಚಾರ ಆಚರಣೆಗಳನ್ನು ನಿರಂತರವಾಗಿ ತಲೆ ತಲೆಮಾರಿನ ತನಕವೂ ಇದನ್ನು ಪಾಲಿಸುತ್ತಾ ಬರಬೇಕು ಎಂಬ ಕಾರಣಕ್ಕಾಗಿ ಅದಕ್ಕೆ ಭಕ್ತಿಯ ರೂಪವನ್ನು ಕೊಟ್ಟಿರುತ್ತಾರೆ. ಹಿರಿಯರ ಆಚಾರ –ವಿಚಾರ ಎಲ್ಲವೂ ನಮ್ಮ ತಿಲುವಳಿಕೆಗಿಂತ ಮೇಲ್ಮಟ್ಟದ್ದು. ಅಂತದ್ದರಲ್ಲಿ ಒಂದು ಈ ಅಷಾಢ ಅಮಾವಾಸ್ಯೆಯ ದಿನ ಹಾಲೆ, ಮದ್ದಾಲೆ, ಪಾಲೆ, ಸಪ್ತಪರ್ಣಿ ಮರದ ಸಿಪ್ಪೆ ಯನ್ನು ತೆಗೆದು ಅದರ ಒಂದೆರಡು ಬಿಂದು ರಸ ಸೇವಿಸುವುದು. ಹಾಗೆಯೇ ಮುಂದಿನ ಪಂಚಮಿಯಂದು ನಾಗನಿಗೆ ಹಾಲೆರೆಯುವುದು.
ಸೂರ್ಯೋದಯಕ್ಕೆ ಮುಂಚೆ ಮದ್ದಾಲೆ ಮರದ ಬುಡಕ್ಕೆ ಹೋಗಿ ಕತ್ತಿ ಇತ್ಯಾದಿ ಆಯುಧಗಳ ಸಹಾಯವಿಲ್ಲದೇ ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆದು ಚೂರು ಚೆಕ್ಕೆಯನ್ನು ಜಗಿದು ಸೇವಿಸುವುದು ತುಳು ನಾಡಿನಲ್ಲಿ ಪ್ರತೀತಿ. ಈ ಮರದ ತೊಗಟೆಯ ರಸಕ್ಕೆ ಅನಾರೋಗ್ಯ ನಿವಾರಣೆ ಶಕ್ತಿ ಇದೆ. ಈ ಮರವೂ ಸಹ ಪೂಜನೀಯವಾಗಿರುತ್ತದೆ.
ಮದ್ದಾಲೆಗೆ ಇದೆ ದೈವಿಕತೆ:
- ಪೆರಿಯಾಕುಳು ಎಂಬ ಯಮಳ ವೀರರು ಬೈಲಬೀಡು ಬಳಿಯ ಮದ್ದಾಲೆ ಅಥವಾ ಪಾಲೆ ಮರದ ಬುಡದಲ್ಲಿ ಮಾಯವಾದರು ಎಂಬ ಐತಿಹ್ಯವಿದೆ.
- ಅದೇ ರೀತಿಯಲ್ಲಿ ಪಾಲೆ ಮರದ ಬುಡದಲ್ಲಿ ಕೆಲವು ದೈವಗಳು ನೆಲೆಸಿರುತ್ತವೆ ಎಂಬ ನಂಬಿಕೆ ಇದ್ದು ಸಾಮಾನ್ಯವಾಗಿ ಈ ಮರವನ್ನು ಅನವಶ್ಯಕ ಕಡಿದು ಹಾಕುವುದಿಲ್ಲ.
- ಇದು ತುಂಬಾ ಎತ್ತರವಾಗಿ ಹುಲುಸಾಗಿ ಬೆಳೆಯುವ ಕಾರಣ ಇದರ ದೈತ್ಯ ಸ್ವರೂಪವೇ ದೈವದ ನೆಲೆಯಾಗಿ ಕಾಣುತ್ತದೆ.
- ಮದ್ದಾಲೆ ಮರ ಹೆಚ್ಚಿನ ಎಲ್ಲಾ ಕಡೆ ಕಂಡು ಬರುತ್ತದೆ.
- ಇದನ್ನು ಜಂತಾಲೆ ಮರ, ಜಂತುಳ, ಕೋಡಾಲೆ, ಸಪ್ತಪರ್ಣಿ, ಸಾತ್ವಿನ್ ಎಂಬುದಾಗಿ ಕರೆಯುತ್ತಾರೆ.
- ಕರಾವಳಿಯ ಉದ್ದಕ್ಕೂ, ಮಲೆನಾಡಿನಲ್ಲೂ ಕಾಣಸಿಗುತ್ತದೆ. ಇದು ವೇಗವಾಗಿ ಬಲು ಎತ್ತರವಾಗಿ ಬೆಳೆಯುತ್ತದೆ. ಹಾಗಾಗಿ ಇದು ಸಿಡಿಲು ನಿರೋಧಕವಾಗಿಯೂ ಕೆಲಸ ಮಾಡುತ್ತದೆ ಎನ್ನುತ್ತಾರೆ.

ಅಮಾವಾಸ್ಯೆಯಂದು ಯಾಕೆ ಮದ್ದಾಲೆ?
- ಮದ್ದಾಲೆ ಮರ ತೊಗಟೆಯನ್ನು ಆಷಾಢ ಮಾಸದ ಅಮಾವಾಸ್ಯೆಯಂದೇ ತಿನ್ನಬೇಕೆಂಬ ವಾಡಿಕೆ ಬಂದುದಕ್ಕೆ ಕಾರಣ, ಆಗ ಅತಿಯಾಗಿ ಮಳೆ, ಗಾಳಿ ಇರುತ್ತದೆ. ಥಂಡಿ ವಾತಾವರಣ ಸಾಮಾನ್ಯ.
- ಈ ವಾತಾವರಣ ಎಲ್ಲಾ ತರಹದ ರೋಗ ರುಜಿನಗಳಿಗೆ ಮೂಲ ಕಾರಣವಾಗಿರುತ್ತದೆ.
- ಈ ಸಮಯದಲ್ಲಿ ಸಾಮಾನ್ಯವಾಗಿ ಜ್ವರ, ಶೀತ, ನಂಜು ಮುಂತಾದ ಅನಾರೋಗ್ಯವೆಂಬುದು ಪ್ರತೀ ಮನೆಯಲ್ಲೂ ಇರುತ್ತದೆ.
- ಈ ಅನಾರೋಗ್ಯವನ್ನು ಶಮನ ಮಾಡಲು ಈ ಮರದ ಚೆಕ್ಕೆಯನ್ನು ಹಿತ ಮಿತವಾಗಿ ಸೇವನೆ ಮಾಡಿ ಎಂಬುದಾಗಿ ಹಿರಿಯರು ವಾಡಿಕೆ ಮಾಡಿಟ್ಟಿದ್ದಾರೆ.
ಅನಾರೋಗ್ಯ ಉಂಟಾದಾಗ ಅದರ ಉಪಶಮನಕ್ಕೆ ನಮ್ಮ ಪ್ರಕೃತಿಯಲ್ಲಿ ಹಲವಾರು ಗಿಡ ಮೂಲಿಕೆಗಳು ಇವೆ. ಅದನ್ನು ನಾವು ಗುರುತಿಸಿ , ಸಂರಕ್ಷಿಸಿ, ಅದರ ಫಲ ಪಡೆಯಲು ಹಿರಿಯರು ಅದನ್ನು ಒಂದು ಸಾಂಪ್ರದಾಯವಾಗಿ ಆಚರಣೆಗೆ ತಂದಿದ್ದಾರೆ. ಇದರಲ್ಲಿ ಹೆಚ್ಚಿನವು ನಮಗೆ ಗೊತ್ತಿಲ್ಲ. ಒಟ್ಟಾರೆಯಾಗಿ ನಾವು ಹಿರಿಯರು ಮಾಡುತ್ತಿದ್ದರು, ನಾವೂ ಮಾಡಬೇಕು ಅಥವಾ ಇದು ನಮ್ಮ ಹೆಗ್ಗಳಿಕೆ ಎಂದು ಅದನ್ನು ಅನುಸರಿಸುತ್ತೇವೆ.

ಭಾರೀ ಔಷಧೀಯ ಗಿಡ:
- ಮದ್ದಾಲೆ ಇದರ ವೈಜ್ಞಾನಿಕ ಹೆಸರು Alstonia scholaris.
- ಈ ಮರದ ಎಳೆ ಕಡ್ಡಿಯಲ್ಲಿ ಹಲ್ಲುಜ್ಜುವುದರಿಂದ ಹಲ್ಲು ನೋವು, ಕೀವು ಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ.
- ಇದರ ಚೆಕ್ಕೆಯನ್ನು ಅರೆದು ಪೇಸ್ಟ್ ಮಾಡಿ ಹುಣ್ಣಿನ ಮೇಲೆ ಹಚ್ಚಿದರೆ ಹುಣ್ಣು (ಬ್ಯಾಕ್ಟೀರಿಯಾ ಮುಕ್ತವಾಗಿ) ಗುಣಮುಖವಾಗುತ್ತದೆ.
- ಮೊದಲ ಹೆರಿಗೆಯ ಸಮಯದಲ್ಲಿ ತಾಯಿಯಂದಿರಿಗೆ ಹಾಲು ಹೆಚ್ಚಾಗಲು ಈ ಮರದ ಚೆಕ್ಕೆಯ ರಸ ಸಹಕಾರಿ.
- ಇದನ್ನು ಬಾಣಂತಿಯರು ಸೇವಿಸುವುದರಿಂದ ಅವರಲ್ಲಿ ತಿನ್ನುವ ಆಶೆ ಹೆಚ್ಚುತ್ತದೆ.
- ಇದರಿಂದ ನಿತ್ರಾಣ ಕಡಿಮೆಯಾಗುತ್ತದೆ.

- ಈ ಮರಕ್ಕೆ ಕ್ಯಾನ್ಸರ್ ಗುಣ ಮಾಡುವ ಶಕ್ತಿಯೂ ಇದೆ ಎನ್ನಲಾಗುತ್ತದೆ.
- ತುಂಬಾ ಕಹಿಯಾದ ಕಾರಣ ಇದನ್ನು ಆಗಾಗ ಸೇವಿಸುವುದನ್ನು ಇಚ್ಚೆ ಪಡುವುದಿಲ್ಲ.
- ಅದಕ್ಕಾಗಿ ಈ ದಿನದಂದು ಸೇವಿಸಿದರೆ ಒಳ್ಳೆಯದು, ಅದಕ್ಕೆ ಸ್ವಲ್ಪ ಉಪ್ಪು, ಕರಿ ಮೆಣಸು ಸೇರಿಸಿದರೆ ಕಹಿ ಹೊಡೆದು ಹೋಗುತ್ತದೆ, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.
- ಅದರ ರಸ ಅರೆದು ಕುಡಿಯಬೇಕೆಂದೇನೂ ಇಲ್ಲ.
- ಚೆಕ್ಕೆಯನ್ನು ಜಗಿದರೂ ಸಾಕಾಗುತ್ತದೆ.
- ಕಿಬ್ಬೊಟ್ಟೆ ಮತ್ತು ಹೊಟ್ಟೆ ಬಿಗಿತವನ್ನು ಗುಣ ಮಾಡುವಲ್ಲಿ ಈ ಮರದ ತೊಗಟೆಯ ಹುಡಿ ಸಹಾಯಕ.
- ಮಕ್ಕಳಿಗೆ ಈ ಮರದ ಚೆಕ್ಕೆಗೆ ಶುಂಠಿ ರಸ ಸೇರಿಸಿ ಸೇವಿಸಿದರೆ ಜ್ವರ ಉಪಶಮನವಾಗುತ್ತದೆ.
- ತೀವ್ರ ತರದ ವಾತರೋಗ, ಮತ್ತು ಉಸಿರಾಟ ತೊಂದರೆಗೆ ಈ ಮರದ ಚೆಕ್ಕೆಯ ಪೇಸ್ಟ್ ಔಷದಿಯಾಗಿದೆ.
- ಇದು ತೆಲೆ ನೋವನ್ನೂ ಗುಣ ಪಡಿಸುತ್ತದೆ.
- ಹೊಟ್ಟೆ ಹುಣ್ಣು stimulant on ulcers ನಿವಾರಣೆಗೂ ಇದು ಉಪಯುಕ್ತ. ಮರದ ಕಾಯಿಯೂ ಸಹ ಅಪಸ್ಮಾರ epilepsy ಕಾಯಿಲೆಗೆ ಔಷದಿ.
- ಮರದ ಕಾಂಡ ಎಲೆ ಯಾವ ಭಾಗಕ್ಕೆ ಗಾಯವಾದರೂ ಒಂದು ಹಾಲಿನಂತಹ ರಸ ಸ್ರವಿಸುತ್ತದೆ.
- ಅದಕ್ಕಾಗಿಯೇ ಹಾಲೆ ಮರ, ತುಳುವಿನಲ್ಲಿ ಪಾಲೆ ಮರ ಎಂದಿರಬೇಕು.
- ಈ ಹಾಲು ಮತ್ತು ರಸಕ್ಕೇ ಔಷಧೀಯ ಗುಣ ಇರುವುದು.

ಯಾಕೆ ಬೆಳಗ್ಗಿನ ಜಾವ ತೆಗೆಯಬೇಕು:
- ಈ ಎಲ್ಲಾ ಔಷದೀಯ ಗುಣಗಳನ್ನು ಅರಿತೇ ನಮ್ಮ ಪೂರ್ವಜರು ವ್ಯಾದಿಗಳು ಇರಲಿ, ಇಲ್ಲದಿರಲಿ, ಮುಂಜಾಗರೂಕತೆಯಾಗಿ ವರ್ಷಕ್ಕೊಮ್ಮೆ ಈ ಮರದ ಚೆಕ್ಕೆಯ ರಸವನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲ್ಲರೂ ಸೇವಿಸಲಿ ಎಂದು ವರ್ಷದಲ್ಲಿ ಒಂದು ದಿನವನ್ನು ನಿಗದಿ ಮಾಡಿದ್ದರು.
- ಬೆಳಗ್ಗಿನ ಜಾವವೇ ಇದನ್ನು ತೆಗೆಯುವುದಕ್ಕೆ ಹೇಳಿದ್ದು ಮತ್ತೇನಕ್ಕೂ ಅಲ್ಲ.
- ಆಗ ಮರದ ಎಲೆಗಳು ಸೂರ್ಯನ ಬಾಷ್ಪೀಭವನ ಕ್ರಿಯೆಯಲ್ಲಿ ತೊಡಗಿರುವುದಿಲ್ಲ.
- ಆದ ಕಾರಣ ಸತ್ವಾಂಶಗಳು ತೊಗಟೆಯಲ್ಲಿ ಹೇರಳವಾಗಿರುತ್ತದೆ ಎಂಬ ಕಾರಣಕ್ಕೆ.
ಕತ್ತಲೆಯಲ್ಲಿ ಹೋಗಿ ಯಾವುದಾದರೂ ಮರದ ಚೆಕ್ಕೆ ತೆಗೆದು ಅನಾಹುತವಾಗುವುದನ್ನು ತಡೆಯಲು ಬೆಳಗಾಗಿ ಸೂರ್ಯ ಮೇಲೇರುವ ಮುನ್ನ ತೆಗೆದರೂ ತಪ್ಪಿಲ್ಲ. ಅಥವಾ ಹಿಂದಿನ ದಿನ ಮರವನ್ನು ಸರಿಯಾಗಿ ಗುರುತು ಮಾಡಿಕೊಂಡು ಮರುದಿನ ದಾರಿ ತಪ್ಪದೆ ಹೋಗಿ ಅಲ್ಲಿಂದಲೇ ತನ್ನಿ. ಇದನ್ನು ಅಂದು ಅಲ್ಲದೆ ಬೇರೆ ದಿನದಲ್ಲೂ ಹಿತ ಮಿತವಾಗಿ ಸೇವಿಸುವುದರಿಂದ ಅವಗುಣಗಳಿಲ್ಲ. ಮರಕ್ಕೆ ಹಿಂಸೆಯಾಗದಂತೆ ಸ್ವಲ್ಪ ತೊಗಟೆ ತೆಗೆಯಬೇಕು
ಶಾಸ್ತ್ರ ಪ್ರಕಾರ ಗರಿಷ್ಟ 1 ಚಮಚ ಸೇವನೆ ಶಿಫಾರಿತ. ಲೋಟಗಟ್ಟಲೆ ಸೇವನೆ ಒಂದು ಪ್ಯಾಶನ್. ಈಗ ಈ ಮರದ ತೊಗಟೆ ಹುಡಿ ಮತ್ತು ಪೇಸ್ಟ್ ಆಧರಿತ ಆಯುರ್ವೇದ ಔಷಧಿಗಳು ಲಭ್ಯವಿದೆ. ಈ ಮರ ಹೊಲದಲ್ಲಿ ಇದ್ದರೆ ಕಡಿಯಬೇಡಿ. ಇದರ ಹೂವು ಜೇನು ನೊಣಗಳಿಗೆ ಆಹಾರ. ಇದು ಸಿಡಿಲು ನಿರೋಧಕ ಎಂದೂ ಹೇಳುತ್ತಾರೆ.